ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಶಾಸಕ ಜಿ.ಟಿ. ದೇವೇಗೌಡ

KannadaprabhaNewsNetwork |  
Published : Jul 12, 2024, 01:31 AM IST
10 | Kannada Prabha

ಸಾರಾಂಶ

ಎಂಡಿಎ ಒಂದು ಸಂಸ್ಥೆ. ಬಡವರಿಗೆ ನಿವೇಶನ ನೀಡುವ ಈ ಸಂಸ್ಥೆಯ ಬಗ್ಗೆ ಪ್ರಾಮಾಣಿಕವಾಗಿ ಇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅರ್ಥ ಸಚಿವರೂ ಆಗಿರುವ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಸಾಧ್ಯವಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಹಾಗೂ ರಾಜ್ಯ ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎ ಹಗರಣ ಮತ್ತು ವಾಲ್ಮೀಕಿ ನಿಗದಮದ ಅವ್ಯವಹಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಏಕೆಂದರೆ ಅವರೇ ಅರ್ಥ ಸಚಿವರಾಗಿರುವುದರಿಂದ ಅವರ ಗಮನಕ್ಕೆ ಬಾರದೆ ಹಣಕಾಸಿನ ವರ್ಗಾವಣೆ ಸಾಧ್ಯವಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.

ಎಂಡಿಎ ಒಂದು ಸಂಸ್ಥೆ. ಬಡವರಿಗೆ ನಿವೇಶನ ನೀಡುವ ಈ ಸಂಸ್ಥೆಯ ಬಗ್ಗೆ ಪ್ರಾಮಾಣಿಕವಾಗಿ ಇರಬೇಕು. ಎಂಡಿಎ ಆಯುಕ್ತರಿಗೆ ಜಿಲ್ಲಾಧಿಕಾರಿಗಳೂ ಪತ್ರ ಬರೆದಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಬದಲಿಗೆ ನನ್ನ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗೆ ಸುಮ್ಮನೆ ಅಪಪ್ರಚಾರ ನಡೆಸಿದರೆ ಲೀಗಲ್‌ ನೊಟೀಸ್‌ ನೀಡುತ್ತೇನೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಹಣಕ್ಕಾಗಿ ಬ್ಲಾಕ್‌ ಮೇಲ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಶ್ರೀರಾಂಪುರದಲ್ಲಿ ಸುಂದರಮ್ಮ ಎಂಬವರ 100 ಎಕರೆ ಜಮೀನಿಗೆ ಬದಲಾಗಿ 125 ಎಕರೆ ವಶಕ್ಕೆ ಪಡೆಯಲಾಗಿತ್ತು. ಅವರು ನ್ಯಾಯಾಲಯಕ್ಕೆ ಹೋಗಿ ಎಲ್ಲಾ ಜಮೀನು ಹಿಂದಕ್ಕೆ ಪಡೆದರು. ಆದ್ದರಿಂದ ಗೊತ್ತಿಲ್ಲದೆ ಜಮೀನು ವಶಕ್ಕೆ ಪಡೆದಿದ್ದರೆ ಪರಿಹಾರ ಕೊಡಲು ಅವಕಾಶವಿದೆ. 50-50 ಅನುಪಾತ ಈ ಹಿಂದಿನಿಂದಲೂ ಇದೆ. ಎಂಡಿಎ ನಲ್ಲಿ ಇಂತಹ ರೈತರಿಗೆ ಪರಿಹಾರ ನೀಡಲಾಗುತ್ತಿತ್ತು. ನಮಗೆ ರೈತರು ಮತ್ತು ಪ್ರಾಧಿಕಾರ ಎರಡೂ ಉಳಿಯಬೇಕು. ಪ್ರಾಧಿಕಾರದ ಸಭೆಯಲ್ಲಿ ಈ ಕುರಿತಾದ ಪ್ರಸ್ತಾಪವಾಗಿಲ್ಲ. ಕೂಡಲೇ ತನಿಖಾಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಬೇಕು ಎಂದರು.

ಭೂಮಿ ವಶಕ್ಕೆ ಪಡೆಯುವಾಗ ಅಧಿಕಾರಿಗಳು ಅಗತ್ಯ ದಾಖಲೆ ಪರಿಶೀಲಿಸಬೇಕಿತ್ತು. ಆದರೆ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅವರು ಹೇಳಿದರು.

ಎಂಡಿಎ ವಿಷಯದಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರು ಲೋಪ ಎಸಗಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಎಂಡಿಎ ನಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಕಳೆದ ಮೂರು ತಿಂಗಳಲ್ಲಿ 50:50 ಅನುಪಾತದಡಿ ಹಚ್ಚು ನಿವೇಶನ ನೀಡಲಾಗಿದೆ. ಸದನದಲ್ಲಿ ಪ್ರತಿಭಟಿಸುವ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಮಂಜೇಗೌಡ, ಸಿದ್ದರಾಮಯ್ಯ ಯಾರೇ ಮಾಡಿದ್ದರೂ ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ ಎಂದರು.

ರಾಮಕೃಷ್ಣ ಹೆಗಡೆ, ಬಂಗಾರಪ್ಪ ಎರಡು ಬಾರಿ ರಾಜೀನಾಮ ಕೊಟ್ಟಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನಂತರ ನಿರಪರಾಧಿ ಎಂದು ಸಾಬೀತಾದರೆ ಮತ್ತೆ ಮುಖ್ಯಮಂತ್ತಿ ಆಗಲಿ ಎಂದು ಅವರು ಕಿವಿಮಾತು ಹೇಳಿದರು.

ನಾನೂ ನಿವೇಶನ ಪಡೆದಿರುವುದಾಗಿ ನನ್ನ ಮೇಲೂ ಆರೋಪ ಮಾಡಿದ್ದಾರೆ. ಓಡಿ ಹೋಗಿದ್ದಾನೆ ಎಂದು ದೂರಿದ್ದಾರೆ. ಆದರೆ ನಾನು ಹುಟ್ಟು ಹೋರಾಟಗಾರ. ಹೆದರಿ ಓಡುವ ಪ್ರಶ್ನೆಯೇ ಇಲ್ಲ. ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ಏಳುಬೀಳು ಕಂಡಿದ್ದೇನೆ. ಸಿದ್ದರಾಮಯ್ಯ ಚುನಾವಣೆಗೆ 1983 ರಲ್ಲೇ ಹಣ ಖರ್ಚು ಮಾಡಿದ್ದೇನೆ. ಯಾರಿಂದಲೂ ದುಡ್ಡು ಪಡೆದಿಲ್ಲ. ಆ ರೀತಿ ಬೆಳೆದಿರುವ ನಾನು ಪ್ರಾಮಾಣಿಕ, ಮಾದರಿ ರಾಜಕಾರಣ ಮಾಡಿದ್ದೇನೆ. ಯಾವುದೇ ಕಮರ್ಷಿಯಲ್ ಆಸ್ತಿ ಇಲ್ಲ. ನಮ್ಮ ಕುಟುಂಬದ ಆಸ್ತಿ ಇದ್ದರೆ ಬರೆದುಕೊಡುತ್ತೇನೆ ಎಂದರು.

ನನ್ನ ಒಂದು ನಿವೇಶನ ಇದ್ದರೂ ದಾಖಲೆ ಕೊಡಿ. ಅದನ್ನು ಅವರಿಗೆ ಬರೆದುಕೊಡುತ್ತೇನೆ. ಹೌಸಿಂಗ್ ಬೋರ್ಡ್ ಅಧ್ಯಕ್ಷ ಆಗಿದ್ದಾಗ ಸಾಕಷ್ಟು ಆರೋಪ ಮಾಡಿ ಎಸಿಬಿ ತನಿಖೆ ನಡೆಸಿದರು. ಆದರೆ ಪ್ರಯೋಜನ ಆಗಲಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ