ಚನ್ನಪಟ್ಟಣ: ಚನ್ನಪಟ್ಟಣ ತಾಲೂಕಿನೊಂದಿಗೆ ನನ್ನದು ಭಾವನಾತ್ಮಕ ಸಂಬಂಧ ಎನ್ನುವ ಡಿಸಿಎಂ ಡಿ.ಕೆ.ಶಿವಕುಮಾರ್ ತಾಲೂಕಿಗೆ ಏನು ಕೊಡುಗೆ ನೀಡಿಲ್ಲ. ಅವರಿಗೆ ತಾಲೂಕಿನ ಬಗ್ಗೆ ದಿಢೀರ್ ಪ್ರೀತಿ ಉಕ್ಕಲು ಉಪಚುನಾವಣೆ ಕಾರಣವೇ ಹೊರತು ಮತ್ತೇನು ಅಲ್ಲ ಎಂದು ತಾಪಂ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ಆರೋಪಿಸಿದ್ದಾರೆ.
ಚನ್ನಪಟ್ಟಣದಿಂದ ಯೋಗೇಶ್ವರ್ ಅವರು ೫ ಬಾರಿ ಶಾಸಕರಾದರೂ, ಕುಮಾರಸ್ವಾಮಿ ಅವರು ಇಲ್ಲಿಂದ ಗೆದ್ದು ಮುಖ್ಯಮಂತ್ರಿ ಆದರೂ ಇಂದಿಗೂ ಕೆಲವು ಸಮಸ್ಯೆಗಳಾಗಿಯೇ ಉಳಿದಿವೆ. ಇದೀಗ ಕ್ಷೇತ್ರ ಕುರಿತು ಕಾಳಜಿ ತೋರುತ್ತಿರುವ ಡಿ.ಕೆ.ಶಿವಕುಮಾರ್ ಅವರಾದರೂ ಚನ್ನಪಟ್ಟಣವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಆಗ್ರಹಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದ ನಿರ್ಮಾಣ ಕಾರ್ಯ ಇನ್ನು ಅಪೂರ್ಣವಾಗಿದ್ದು, ಇದನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಡಿಸಿಎಂ ಸೂಚನೆ ನೀಡಬೇಕು. ತಾಲೂಕಿನ ಕೆಲವುಕಡೆ ದಲಿತರೇ ವಾಸಿಸುವ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಒಂದೊಂದು ಕುಟುಂಬದಲ್ಲಿ ಕನಿಷ್ಠ ಹತ್ತಾರು ಜನ ವಾಸಿಸುತ್ತಿದ್ದಾರೆ. ಹಾಗೆಯೇ ಚನ್ನಪಟ್ಟಣದಲ್ಲಿ ಅತೀ ಹೆಚ್ಚು ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಅವರಿಗೆ ನಿವೇಶನ ಕಲ್ಪಿಸಬೇಕು. ನನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು.ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿದ್ದರೂ ಸೂಕ್ತ ಸ್ಥಳ ಇಲ್ಲದ ಕಾರಣ, ಹಣ ವಾಪಸ್ಸಾಗಿದ್ದು, ಬಾಬು ಜಗಜೀವನ್ ರಾಂ ಅವರ ಭವನ ನಿರ್ಮಾಣಕ್ಕೆ ನಗರಸಭೆ ವ್ಯಾಪ್ತಿಯಲ್ಲಿ ಒಂದು ಸೂಕ್ತ ಜಾಗ ನೀಡಲು ಸಂಬಂಧಪಟ್ಟವರಿಗೆ ಆದೇಶಿಸಬೇಕು. ಕೆಲ ಸರ್ಕಾರಿ ಕಚೇರಿಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಅದಕ್ಕಾಗಿಯೇ ಪ್ರತಿ ತಿಂಗಳು ಕೋಟ್ಯoತರ ತೆರಿಗೆ ಹಣ ವ್ಯಯ ಆಗುತ್ತಿದ್ದು, ಒಂದೊಂದು ಕಚೇರಿ ಒಂದೊಂದು ಕಡೆ ಇರುವುದರಿಂದ ಜನ ಅಲೆದಾಡುವಂತಾಗಿದೆ. ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೆಡೆ ತರುವ ಕೆಲಸ ಮಾಡಬೇಕು.
ಬುದ್ಧ ವಿಹಾರ ಸೇರಿದಂತೆ, ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕಾಗಿ ತಾಲೂಕಿನಲ್ಲಿ ೫ ಎಕರೆ ಜಮೀನು ನೀಡಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಅತಿಮುಖ್ಯವಾಗಿ ತಾಲೂಕಿಗೆ ಆನೆ ಹಾವಳಿಯಿಂದ ರೈತರ ಬವಣೆ ತಪ್ಪಿಸುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.