ಹೊಸಪೇಟೆ: ಹಿರಿಯ ನಾಗರಿಕರು ಮಕ್ಕಳು ಮತ್ತು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳಿಗೆ ಹಿರಿಯರೇ ಅತ್ಯುತ್ತಮ ಮಾರ್ಗದರ್ಶಕರು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಹಿರಿಯರಾದವರು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಜೊತೆಗಿದ್ದಾಗ ಮಕ್ಕಳಂತಿರುವ ದೊಡ್ಡ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳಿರಲಿ, ಮೊಮ್ಮಕ್ಕಳಿರಲಿ ಯಾರಾದರೂ ಸಿಡಿಮಿಡಿಗೊಂಡಾಗ ಆ ವೇಳೆ ಹಿರಿಯರು ಮೌನ ವಹಿಸಬೇಕು. ಮಾತಿಗೆ ಮಾತು ಬೆಳೆಸಬಾರದು. ಶಾಂತರಾಗಿದ್ದು, ವಾತಾವರಣ ತಿಳಿಯಾದಾಗ ಕಿರಿಯರಿಗೆ ತಿಳಿ ಹೇಳಬೇಕು. ಕುಟುಂಬ ನಡೆಸುವ ಮಹತ್ವದ ಜವಾಬ್ದಾರಿಯ ಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು. ಏನಾದರೂ ಅವಘಡಗಳಾದಾಗ ಅದನ್ನು ಎದುರಿಸಿ ಬಾಳಲು ಅವರಿಗೆ ಧೈರ್ಯ ಹೇಳಬೇಕು ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಈ ಹಿಂದೆ ಹಿರಿಯ ನಾಗರಿಕರು ಬಹುತೇಕ ತಮ್ಮ ಸಮಯವನ್ನು ಮನೆಯಲ್ಲಿ ಮಕ್ಕಳ ಜೊತೆಗೆ ಕಳೆಯುತ್ತಿದ್ದರು. ಈಗ ಈ ವಾತಾವರಣ ಕಾಣುತ್ತಿಲ್ಲ. ಹಿರಿಯರಾದವರು ಆಸ್ತಿ, ಹಣದ ಬೆನ್ನು ಹತ್ತಿ ಹೋಗಬಾರದು. ಭ್ರಮೆಗಳಿಂದ ಹೊರಬರಬೇಕು. ಚಿಂತೆಗಳನ್ನು ಕೈಬಿಡಬೇಕು ಎಂದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಅವಿನಾಶ ಎಸ್. ಗೋಟಖಂಡಿ, ಹರಪನಹಳ್ಳಿಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್, ಹೊಸಪೇಟೆ ನಿವೃತ್ತ ನೌಕರ ಸಂಘದ ಅಧ್ಯಕ್ಷ ರಾಮಪ್ಪ ಮತ್ತಿತರರಿದ್ದರು.