ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಗಡಿಗ್ರಾಮ ಬಸಾಪುರದಲ್ಲಿ ಮಂಗಳವಾರ ನೂತನವಾಗಿ ಆರಂಭಿಸಲಾದ ದಲಿತ ಸಂಘರ್ಷ ಸಮಿತಿ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರು ಗ್ರಾಮಗಳಲ್ಲಿ ತಮ್ಮ ಸಮುದಾಯದ ಅಭಿವೃದ್ಧಿ ಸೇರಿದಂತೆ ಇತರೆ ಸಮುದಾಯಗಳ ಜೊತೆ ಸೌಹಾರ್ದ ಸಂಬಂಧವನ್ನು ಇಟ್ಟುಕೊಂಡು ಸಂಘಟನೆಗಳನ್ನು ಮಾಡಬೇಕು. ಈ ರಾಜ್ಯದಲ್ಲಿ ನೊಂದವರ ಪರವಾಗಿ ಬೀದಿಗಿಳಿದು ಹೋರಾಡಿದ ಪ್ರೊ.ಬಿ.ಕೃಷ್ಣಪ್ಪ ಅವರ ಕುರಿತು ಇಂದಿನ ಯುವಕರಿಗೆ ಮಾಹಿತಿ ತಿಳಿಸುವ ಕೆಲಸ ಆಗಬೇಕಿದೆ. ಅಂತಹ ಹೋರಾಟಗಾರರು ಇಲ್ಲದೇ ಹೋಗಿದ್ದರೆ ಈ ರಾಜ್ಯದ ಶೋಷಿತರ ಪರಿಸ್ಥಿತಿ ಹೇಗೆ ಇರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟಿ.ವಿಜಯಕುಮಾರ್ ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ದಲಿತ ಚಳವಳಿಯಲ್ಲಿ ಹೋರಾಟ ಮಾಡಿಕೊಂಡು ಬಂದವರು ಇಂದಿಗೂ ಗ್ರಾಮ ಶಾಖೆಗಳನ್ನು ಮಾಡುತ್ತಿದ್ದೇವೆ. ಆರಂಭದ ಕಾಲಘಟ್ಟದಲ್ಲಿ ಚಳವಳಿ ಉತ್ತುಂಗದಲ್ಲಿತ್ತು. ಇಂತಹ ಸಂದರ್ಭದಲ್ಲಿ ಬೀದಿಗಿಳಿದು ಹೋರಾಡಲು ನಮಗೆ ಕಲಿಸಿದ್ದೇ ಪ್ರೊ.ಬಿ.ಕೃಷ್ಣಪ್ಪ. ತಾಯ್ತನದ ಪ್ರೀತಿ ಕೃಷ್ಣಪ್ಪರಲ್ಲಿ ಇತ್ತು. ಅವರ ದಾರಿಯಲ್ಲಿ ಸಾಗಿದ ನಾವು ಇಂದಿಗೂ ಸಮುದಾಯದ ನೊಂದವರ ಪರ ಧ್ವನಿ ಎತ್ತುವ ಕಾಯಕದಲ್ಲಿ ಇದ್ದೇವೆ ಎಂದರು.
ಕವಿ ಆನಂದಕುಮಾರ್ ಮಾತನಾಡಿ, ಗ್ರಾಮೀಣ ಹಿನ್ನೆಲೆಯಲ್ಲಿ ಹುಟ್ಟಿಬಂದ ನಾವೆಲ್ಲರೂ ಸಾಮಾಜಿಕ ಅಸಮಾನತೆಯ ಕಾರಣಕ್ಕೆ ಸಾಕಷ್ಟು ನೊಂದಿದ್ದೇವೆ. ಅಂಬೇಡ್ಕರ್ ಕೊಟ್ಟ ಅವಕಾಶಗಳು ಪ್ರೊ.ಕೃಷ್ಣಪ್ಪರ ಶಿಕ್ಷಣ, ಸಂಘಟನೆ, ಹೋರಾಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.