ಕನ್ನಡಪ್ರಭ ವಾರ್ತೆ ಹಿರಿಯೂರು
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾಂಗ್ರೆಸ್ ನ ಅಂದಿನ ನಾಯಕರಾಗಿದ್ದ ಬಾಲಗಂಗಾಧರನಾಥ ತಿಲಕ್ ರಾಷ್ಟ್ರಪ್ರೇಮಿಗಳಾಗಿದ್ದರು. ದೇಶಕ್ಕೋಸ್ಕರ ಸಂಘಟನೆ ಕಟ್ಟುವ, ಜನರನ್ನು ಜಾಗೃತಗೊಳಿಸುವಂತಹ ದೊಡ್ಡ ಕೆಲಸವನ್ನು ಪ್ರಾರಂಭಿಸಿದ್ದರು. ಬ್ರಿಟಿಷರು ದೇಶವನ್ನು ಆಳುವ ಸಂದರ್ಭದಲ್ಲಿ ದೇಶದ ಜನರನ್ನು ಒಂದು ಮಾಡುವ ನಿಟ್ಟಿನಲ್ಲಿ ತಿಲಕ್ ಅವರಿಂದ ಪ್ರಾರಂಭವಾದ ಗಣೇಶೋತ್ಸವ ಸಾರ್ವಜನಿಕ ಸ್ವರೂಪದ ಕಾರ್ಯಕ್ರಮವಾಯಿತು ಎಂದು ತಿಳಿಸಿದರು.ಇದು ಯಾವುದೋ ಸಂಘ ಸಂಸ್ಥೆ ಪ್ರಾರಂಭಿಸಿದ ಕಾರ್ಯಕ್ರಮವಲ್ಲ. ನಮ್ಮ ದೇಶದಲ್ಲಿ ದೇವರನ್ನು ಗರ್ಭ ಗುಡಿಯಲ್ಲಿಟ್ಟು ಪೂಜೆ ಮಾಡುತ್ತೇವೆ. ಇದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾವು ಮೂರ್ತಿ ಪೂಜೆ ಆರಾಧಕರಾಗಿದ್ದು, ಯಾರು ಮೂರ್ತಿ ಪೂಜೆ ಆರಾಧಿಸುವುದಿಲ್ಲವೋ ಅಂತಹ ದುಷ್ಟರು ಮತ್ತು ಜಿಹಾದಿಗಳು ಜಗತ್ತಿನ ಬೇರೆ ದೇಶಕ್ಕೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಯಾರನ್ನೂ ದ್ವೇಷ ಮಾಡುವುದಿಲ್ಲ. ಯಾರ ವಿರುದ್ಧವೂ ಘೋಷಣೆ ಕೂಗುವುದಿಲ್ಲ. ಆದರೆ ನಮ್ಮ ಮೇಲೆ ಏಕೆ ಕಲ್ಲು ತೂರಾಟ ಮಾಡುವುದು. ಇದನ್ನು ಹಿಂದೂ ಸಮಾಜ ಸಹಿಸಿಕೊಂಡಿರಬೇಕಾ? ಎಂದರು.
ಇಂತಹ ಘಟನೆಗಳು ನಡೆಯಬಾರದು ಎಂದರೆ ಹಿಂದೂ ಸಮಾಜ ಒಗ್ಗಟ್ಟಾಗಿ ಸಂಘಟಿತರಾಗಿರಬೇಕು. ಗಣೇಶೋತ್ಸವ ಕಾರ್ಯಕ್ರಮ ಪ್ರಚೋದನಾತ್ಮಕ ಕಾರ್ಯಕ್ರಮವಲ್ಲ, ಅದು ಭಾವನಾತ್ಮಕ ಕಾರ್ಯಕ್ರಮವಾಗಿದೆ ಎಂದರು.
-----
ನಗರದ ಶಂಕರಮಠದ ಬಳಿ ಪ್ರತಿಷ್ಟಾಪನೆ ಮಾಡಿದ್ದ ಹಿಂದೂ ಮಹಾಗಣಪತಿಯ ಶೋಭಾ ಯಾತ್ರೆಯು ಅದ್ದೂರಿಯಾಗಿ ಜರುಗಿತು. ಶಂಕರಮಠದಿಂದ ಹೊರಟ ಮೆರವಣಿಗೆಯು ಹುಳಿಯಾರು ರಸ್ತೆ, ಚರ್ಚ್ ರಸ್ತೆ, ಆಸ್ಪತ್ರೆ ವೃತ್ತ, ಬಸ್ ನಿಲ್ದಾಣ, ರಂಜಿತ್ ಹೋಟೆಲ್ ಮೂಲಕ ಸಾಗಿ ಬಂದು ನೆಹರೂ ವೃತ್ತ, ಗಾಂಧಿ ವೃತ್ತದ ಮೂಲಕ ಸಾಗಿ ಉದಯ ಹೋಟೆಲ್ ಬಳಿಯಿರುವ ತೋಟದ ಬಾವಿ ತಲುಪಿದ ನಂತರ ಗಣೇಶನ ವಿಸರ್ಜನೆ ಮಾಡಲಾಯಿತು. ಬೃಹತ್ ಶೋಭಾಯಾತ್ರೆಯಲ್ಲಿ ನೂರಾರು ಜನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಭಾಗವಹಿಸಿ ಮೆರವಣಿಗೆಗೆ ಶೋಭೆ ತಂದರು. ಡಿಜೆ ಶಬ್ದಕ್ಕೆ ನೂರಾರು ಯುವಕರು ಬಿಸಿಲನ್ನು ಲೆಕ್ಕಿಸದೆ ಕುಣಿದದ್ದು ವಿಶೇಷವಾಗಿತ್ತು. ವಿವಿಧ ಬಗೆಯ ವೇಷ ಧರಿಸಿದ್ದ ವೇಷಧಾರಿಗಳು ಎಲ್ಲರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರವರು ಪಾಲ್ಗೊಂಡು ಗಣಪತಿಗೆ ಪೂಜೆ ಸಲ್ಲಿಸಿದರು.