ಹಗರಿಬೊಮ್ಮನಹಳ್ಳಿ; ನಂದಿಪುರದ ದೊಡ್ಡಬಸವೇಶ್ವರ ಮಠ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸಾಮೂಹಿಕ ವಿವಾಹಗಳು ಬಡಜನತೆಯ ಆರ್ಥಿಕ ಹೊರೆಯನ್ನು ತಗ್ಗಿಸುವ ಜೊತೆಗೆ ಸಂಸ್ಕಾರ ನೀಡುತ್ತವೆ. ನಂದಿಪುರದ ಮಹೇಶ್ವರ ಸ್ವಾಮೀಜಿಯವರ ಮಠ ಶೈಕ್ಷಣಿಕ, ಧಾರ್ಮಿಕ ಕೊಡುಗೆಗಳನ್ನು ನಿರಂತರವಾಗಿ ನೀಡುತ್ತಿದೆ. ಸತಿ-ಪತಿಗಳು ಉತ್ತಮ ಬದುಕನ್ನು ಕಟ್ಟಿಕೊಂಡಾಗ ಸಾಮೂಹಿಕ ವಿವಾಹಗಳಿಗೆ ಅರ್ಥ ಬರುತ್ತದೆ ಎಂದರು.
ಶಾಸಕ ಕೆ.ನೇಮರಾಜ ನಾಯ್ಕ ಉದ್ಘಾಟಿಸಿ ಮಾತನಾಡಿ, ನೂತನ ದಂಪತಿಗಳು ಮನೆಯ ಹಿರಿಯರನ್ನು ಗೌರವಿಸಿ ಹೊಂದಾಣಿಕೆ ಜೀವನ ನಡೆಸಬೇಕು. ನಂದಿಪುರದ ಮಠ ಸಾಮೂಹಿಕ ವಿವಾಹಗಳ ಮೂಲಕ ಲಕ್ಷಾಂತರ ರುಪಾಯಿ ಉಳಿಸಿ ಮುಂದಿನ ಬದುಕಿಗೆ ನೆರವಾಗಿದೆ ಎಂದು ತಿಳಿಸಿದರು.ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಭಕ್ತರ ನೆರವಿನಿಂದ ಮಠದಲ್ಲಿ ನಿರಂತರವಾಗಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಗಳು ನೆಡೆಯುತ್ತಿವೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಗಂಗಣ್ಣ, ಪುರಸಭೆ ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಗುರು ದೊಡ್ಡಬಸವೇಶ್ವರ ಸೇವಾ ಸಮಿತಿಯ ಬನ್ನಿಗೋಳ ವೆಂಕಣ್ಣ, ಸೋಗಿ ಎಂ.ಬಸವರಾಜ, ನಂದಿಪುರ ಯಮುನಪ್ಪ, ಅಂದಪ್ಪ, ಮೈನಳ್ಳಿ ಕೊಟ್ರೇಶಪ್ಪ, ನಾಗಯ್ಯ ಸ್ವಾಮಿ, ಮೈನಳ್ಳಿ ಕೊಟ್ರೇಶಪ್ಪ, ಚಿತ್ತವಾಡಗಿ ಪ್ರಕಾಶ್, ಹೊಟೇಲ್ ಸಿದ್ದರಾಜು ಇತರರಿದ್ದರು. ಕರಿಬಸವನಗೌಡ ನಿರ್ವಹಿಸಿದರು
ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಗ್ರಾಮದಲ್ಲಿ ಶ್ರೀ ಗುರು ದೊಡ್ಡಬಸವೇಶ್ವರ ರಥೋತ್ಸವದ ನಿಮಿತ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 37 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.