ಗ್ರಂಥಾಲಯ ಸ್ಥಳೀಯ ಶಿಕ್ಷಣ ಕೇಂದ್ರವಾಗಿ ಕಾರ್ಯನಿರ್ವಹಿಸಲಿ: ನಲಿನ್ ಅತುಲ್

KannadaprabhaNewsNetwork | Published : Dec 20, 2024 12:47 AM

ಸಾರಾಂಶ

ಗ್ರಾಮೀಣ ಭಾಗದ ಮಾನವ ಸಂಪನ್ಮೂಲಗಳ ಅಭಿವೃದ್ಧಿಪಡಿಸಲು ಗ್ರಂಥಾಲಯಗಳು ಸ್ಥಳೀಯ ಶಿಕ್ಷಣ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು.

ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರಕನ್ನಡಪ್ರಭ ವಾರ್ತೆ ಕೊಪ್ಪಳ

ಗ್ರಾಮೀಣ ಭಾಗದ ಮಾನವ ಸಂಪನ್ಮೂಲಗಳ ಅಭಿವೃದ್ಧಿಪಡಿಸಲು ಗ್ರಂಥಾಲಯಗಳು ಸ್ಥಳೀಯ ಶಿಕ್ಷಣ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಗುರುವಾರ ಕೊಪ್ಪಳ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಎಚ್.ಟಿ. ಪಾರೇಖ್ ಫೌಂಡೇಶನ್ ಹಾಗೂ ಕಲಿಕೆ-ಟಾಟಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಗ್ರಂಥಾಲಯಗಳ ಕಾರ್ಯ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿದ್ದು, ಕಳೆದ ವರ್ಷ ರಾಷ್ಟ್ರಪ್ರಶಸ್ತಿ ಲಭಿಸಿದೆ. ಕೇರಳದ ಬಳಿಕ ಅತೀ ಹೆಚ್ಚು ಗ್ರಂಥಾಲಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ನಮ್ಮ ಕರ್ನಾಟಕ ರಾಜ್ಯವು ಸದ್ಯ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಇಂತಹ ಕಾರ್ಯ ಚಟುವಟಿಕೆಗಳು ಕಲ್ಯಾಣ ಕರ್ನಾಟಕ ಭಾಗದಿಂದ ವಿಶೇಷವಾಗಿ ಕೊಪ್ಪಳ ಜಿಲ್ಲೆಯಿಂದಲೇ ಮೊದಲು ಪ್ರಾರಂಭವಾಗಿವೆ. ಮೊದಲು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸಣ್ಣ ಮಕ್ಕಳಿಗಾಗಿ ಪುಸ್ತಕಗಳಿಲ್ಲದ ಕಾರಣ ಸಮಸ್ಯೆಯಾಗುತ್ತಿತ್ತು. ಆಗ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಜೋಳಿಗೆ ಕಾರ್ಯಕ್ರಮವು ಮಾದರಿಯಾಗಿದೆ ಎಂದರು.

ಗ್ರಂಥಾಲಯಗಳಲ್ಲಿ ಮೊದಲು ಎಷ್ಟು ಪುಸ್ತಕಗಳಿಗೆ ಅವುಗಳನ್ನು ಓದಲು ಯಾರು ಕೊಂಡೊಯ್ಯಿದಿದ್ದಾರೆ ಮತ್ತು ಮರಳಿಸಿದ್ದಾರೆ ಎಂಬ ಮಾಹಿತಿಯಷ್ಟೇ ಸಿಗುತ್ತಿತ್ತು. ನಂತರ ಮಕ್ಕಳ ಸ್ನೇಹಿ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಅರಿವು ಕೇಂದ್ರಗಳಾಗಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಮಾನಗಳಲ್ಲಿ ಕೌಶಲ್ಯ ಕೇಂದ್ರಗಳಾಗಲಿವೆ. ಶಾಲೆಯಲ್ಲಿ ಓದಲು ಪಠ್ಯ ಪುಸ್ತಕಗಳಿಗೆ ಮಾತ್ರ ಸಿಮಿತವಾಗುತ್ತವೆ. ಆದರೆ, ಗ್ರಂಥಾಲಯಕ್ಕೆ ಬಂದರೆ ಯಾವುದೇ ನಿರ್ದಿಷ್ಟವಿರುವುದಿಲ್ಲ. ಅಲ್ಲಿ ವಿವಿಧ ಬಗೆಗೆ ಪುಸ್ತಕಗಳು ನಮಗೆ ಓದಲು ಸಿಗುತ್ತವೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್‌ನ ಬೆಟ್ಟವು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಇದರ ಬಗ್ಗೆ ಹಲವಾರು ಲೇಖಕರು ಪುಸ್ತಕ ಬರೆದಿದ್ದಾರೆ. ಇಂತಹ ಪುಸ್ತಕಗಳ ಜೊತೆಗೆ ಅಂಜನಾದ್ರಿ, ಕಿನ್ನಾಳ ಕಲೆ, ಭಾಗ್ಯನಗರ ಸೀರೆ ಹಾಗೂ ಇತರ ಐತಿಹಾಸಿಕ ಸ್ಥಳಗಳು ಸೇರಿದಂತೆ ಕೊಪ್ಪಳ ಜಿಲ್ಲೆಯ ಇತಿಹಾಸ, ಸಂಸ್ಕೃತಿಯ ವಿವರ ಒಳಗೊಂಡಂತಹ ಪುಸ್ತಕಗಳನ್ನು ಸಹ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡಬೇಕು. ಇದರ ಜೊತೆಗೆ ಪಾರಂಪರಿಕ ಕಲೆಗಳ ಬಗ್ಗೆ ಪ್ರಾಥಮಿಕ ಮಾಹಿತಿ ಮತ್ತು ಪಾರಂಪರಿಕ ಆಹಾರಗಳ ವಿಧಾನ ಮಾಹಿತಿಯುಳ್ಳ ಪುಸ್ತಕಗಳ ಸಂಗ್ರಹಕ್ಕೂ ಕ್ರಮ ವಹಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಗ್ರಂಥಾಲಯವು ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಬದಲಾವಣೆ ತರಲು ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿರುವ ಸಂಸ್ಥೆಯಾಗಿದೆ. ಗ್ರಾಪಂ ಜೊತೆಗೆ ಇತರ ಗ್ರಾಮೀಣ ಭಾಗಗಳಲ್ಲಿ 155 ಕಡೆ ಗ್ರಾಮೀಣ ಗ್ರಂಥಾಲಯಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯಾಸಕ್ಕಾಗಿ ಬಹಳಷ್ಟು ಯುವ ಜನರು ಗ್ರಂಥಾಲಗಳನ್ನು ಉಪಯೋಗಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಜಿಲ್ಲೆಯಲ್ಲಿ ಒಬ್ಬರು ಪಿಡಿಓ ಮತ್ತೊಬ್ಬರು ಪಿಎಸ್ಐ ಆಗಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದೆ. ಜಿಲ್ಲೆಯ ಎಲ್ಲಾ ಗ್ರಂಥಾಲಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಪುಸ್ತಗಳಿರಬೇಕು. ಈ ಬಗ್ಗೆ ಪುಸ್ತಕಗಳ ಬೇಡಿಕೆಯನ್ನು ಆಯಾ ಗ್ರಾಪಂ ಮೂಲಕ ಕಳುಹಿಸಿಕೊಟ್ಟರೆ, ಅಂತಹ ಪುಸ್ತಕಗಳನ್ನು ಕಳುಹಿಸಿಕೊಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಓದಲು ಗ್ರಂಥಾಲಯದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭ ಕಲಿಕಾ-ಟಾಟಾ ಟ್ರಸ್ಟ್‌ನ ಕೊಪಳ ಶಿಕ್ಷಣ ಕಾರ್ಯಕ್ರಮ ಅಧಿಕಾರಿ ಶಿವುಕುಮಾರ ಯಾದವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಕಲ್ಲಪ್ಪ ತಳವಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿದ್ದರು.

Share this article