ಧಾರವಾಡ: ರಂಗಭೂಮಿಯಲ್ಲಿ ವಿಶಿಷ್ಟ ರೀತಿಯ ಹಲವು ಪ್ರಯೋಗಗಳ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ರಂಗ ನಿರ್ದೇಶಕ ದಿ. ಕೆ ಜಗುಜಂದ್ರ ಹೆಸರಿನಲ್ಲಿ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದಿಂದ ಕೊಡಮಾಡಲಾಗುತ್ತಿರುವ ಈ ಪ್ರಶಸ್ತಿ ರಾಷ್ಟ್ರಮಟ್ಟದಲ್ಲಿ ನೀಡುವಂತಾಗಲಿ ಎಂದು ಹಿರಿಯ ನ್ಯಾಯವಾದಿ ಪ್ರಕಾಶ ಉಡಿಕೇರಿ ಹೇಳಿದರು.
ಖ್ಯಾತ ಸಂಗೀತಗಾರ ಡಾ. ಶ್ರೀಧರ ಕುಲಕರ್ಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೆ.ಜಗುಚಂದ್ರ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ. ಅವರೊಬ್ಬ ಪ್ರತಿಭಾವಂತ ಕಲಾವಿದರಾಗಿದ್ದರು ಎಂದರು. ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್, ಜಗುಚಂದ್ರ ಅವರು ನಮ್ಮಿಂದ ಎಲ್ಲೂ ಹೋಗಿಲ್ಲ. ನಮ್ಮ ಮದ್ಯದಲ್ಲೇ ಶಾಶ್ವತವಾಗಿ ಇರುತ್ತಾರೆ ಎಂದು ಇಬ್ಬರು ಒಡನಾಟವನ್ನು ಸ್ಮರಿಸಿಕೊಂಡರು.
ರಂಗಚಂದ್ರ ಗೌರವ ಪ್ರಶಸ್ತಿ ಸ್ವೀಕರಿಸಿದ ಬಸವರಾಜ ಬೆಂಗೇರಿ, ಪಂ. ಪುಟ್ಟರಾಜ ಗವಾಯಿಗಳ ಜೊತೆಗಿನ ಕ್ಷಣಗಳು ಮತ್ತು ಜಗುಚಂದ್ರ ಅವರೊಂದಿಗೆ ವೇದಿಕೆಗಳನ್ನು ಹಂಚಿಕೊಂಡ ನೆನಪುಗಳನ್ನು ಸ್ಮರಿಸಿದರು. ಸಿದ್ದಲಿಂಗಪ್ಪ ನರೇಗಲ್ಲ, ಮಹಾದೇವ ಸತ್ತಿಗೇರಿ ಮಾತನಾಡಿದರು. ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎಫ್. ನಾಡಗೌಡದೇಸಾಯಿ, ಎನ್.ಡಿ. ದೇಸಾಯಿ, ಎಂ.ಎಸ್. ಫರಾಸ ಇದ್ದರು. ಗಾಯಕರಾದ ಪ್ರೇಮಾನಂದ ಶಿಂಧೆ, ಪ್ರಮೀಳಾ ಜಕ್ಕಣ್ಣವರ ರಂಗಗೀರೆಗಳನ್ನು ಹಾಡಿದರು. ನಂತರ ಸರಸ್ವತಿ ಜ್ಞಾನ ಮಹಿಳಾ ಮಂಡಳ, ಸುಶೀಲಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕಲ್ಪತರು ಮಹಿಳಾ ಸಂಘ, ಹಾಗೂ ಕಲಾಶಕ್ತಿ ಫೌಂಡೇಶನ್ ವತಿಯಿಂದ ಜಾನಪದ ಹಾಡು ಹಾಗೂ ಜನಪದ ನೃತ್ಯ ನಡೆಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಗಾಯಕಿ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಶ್ರೀಶೈಲ ಚಿಕನಳ್ಳಿ ವಂದಿಸಿದರು.