ಸಾಹಿತ್ಯ ಸಮ್ಮೇಳನ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸಲಿ

KannadaprabhaNewsNetwork | Published : Jan 25, 2025 1:01 AM

ಸಾರಾಂಶ

ಜ. 28ರಂದು ಪಟ್ಟಣದಲ್ಲಿ ಏರ್ಪಡಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಮನೋರಂಜನೆಗೆ ಸೀಮಿತಗೊಳಿಸುವ ಬದಲಾಗಿ ಕನ್ನಡ ಭಾಷೆಯ ಉಳಿವಿಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.

ಸವಣೂರ: ಜ. 28ರಂದು ಪಟ್ಟಣದಲ್ಲಿ ಏರ್ಪಡಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಮನೋರಂಜನೆಗೆ ಸೀಮಿತಗೊಳಿಸುವ ಬದಲಾಗಿ ಕನ್ನಡ ಭಾಷೆಯ ಉಳಿವಿಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.ಪಟ್ಟಣದ ಲಲಾಟೇಶ್ವರ ಕಲ್ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸವಣೂರು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸರ್ಕಾರ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಅನುದಾನವನ್ನು ಕಡಿತಗೊಳಿಸಿದ್ದರೂ ಸಹ ಸ್ಥಳೀಯರಿಂದ ಧನ ಸಹಾಯ ಪಡೆದು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿ ಎಂದು ಶುಭ ಹಾರೈಸಿದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ ನೇತೃತ್ವ ವಹಿಸಿ ಮಾತನಾಡಿ, ಈಗಾಗಲೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಿದ್ದತೆ ಕೈಗೊಳ್ಳಲಾಗಿದೆ. ಶಿಕ್ಷಕರು, ಸರ್ಕಾರಿ ನೌಕರರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಸರ್ವರು ಹೆಚ್ಚಿನ ಆಸಕ್ತಿಯಿಂದ ಜ. 28ರಂದು ಸಮ್ಮೇಳನದಲ್ಲಿ ಪಾಲ್ಗೊಂಡಲ್ಲಿ ಮಾತ್ರ ಕನ್ನಡ ಭಾಷೆಯ ಉಳಿವಿಗಾಗಿ ಸಾಹಿತ್ಯ ಪರಿಷತ್ ಕೈಗೊಳ್ಳುತ್ತಿರುವ ಹೋರಾಟಕ್ಕೆ ಸಹಕಾರ ನೀಡಲು ಸಾಧ್ಯವಾಗಲಿದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಯೋಗಿ ಆಲದಕಟ್ಟಿ ಮಾತನಾಡಿ, ಸಂಘಟನೆಯ ವತಿಯಿಂದ ಸಮ್ಮೇಳನಕ್ಕೆ ಅವಶ್ಯವಾಗಿರುವ ಸಹಕಾರ ನೀಡಿ ಸರ್ವ ಶಿಕ್ಷಕರ ಬಳಗದೊಂದಿಗೆ ಸಮ್ಮೇಳನವನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಸಮ್ಮೇಳನ ಅಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮ್ಮೇಳನ ಕಾರ್ಯಾಧ್ಯಕ್ಷ ರಮೇಶ ಅರಗೋಳ, ಉಪಾಧ್ಯಕ್ಷರಾದ ಎಂ.ಜೆ. ಮುಲ್ಲಾ, ಮೋದಿನ ಹಣಗಿ, ಕೋಶಾಧ್ಯಕ್ಷ ಸುಭಾಸ ಮಜ್ಜಗಿ, ಪದಾಧಿಕಾರಿಗಳಾದ ಪ್ರವೀಣ ಚರಂತಿಮಠ, ಡಾ. ಗುರುಮಹಾಂತಯ್ಯ ಆರಾಧ್ಯಮಠ, ಉಮೇಶ ದಾಮೋದರ, ಶ್ರೀನಿವಾಸ ಖಾರದ, ಪರಶುರಾಮ ಈಳಗೇರ, ಬಸನಗೌಡ ಪಾಟೀಲ, ರವಿ ಕರಿಗಾರ, ರೇಖಾ ಕಣೇಕಲ್, ಸುನಂದಾ ಚಿನ್ನಾಪೂರ ಹಾಗೂ ಇತರರು ಪಾಲ್ಗೊಂಡಿದ್ದರು.

Share this article