ಹಾವೇರಿ: ಜಾಗತಿಕವಾಗಿ ಶರಣರ ವಚನ ಸಂದೇಶಗಳು ಜೀವನ ಸಂದೇಶವಾಗಿ ಸ್ವೀಕಾರವಾಗುತ್ತಿರುವಾಗ, ಭಾರತದಲ್ಲಿ ವಚನಗಳು ಮನೆ ಮನೆಯ ಮಾತಾಗಬೇಕಾದ ಅಗತ್ಯವನ್ನು ಸಮಾಜಕ್ಕೆ ಸಾರಿ ಹೇಳಬೇಕಾದ ಕಾಲದಲ್ಲಿ ನಾವಿದ್ದೇವೆ ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ಇಲ್ಲಿಯ ವಿನಾಯಕ ನಗರದ ಮಂಗಳಾ ಹಾಗೂ ರುದ್ರಗೌಡ ತೆಂಬದ ಅವರ ಮನೆಯಂಗಳದಲ್ಲಿ ಬಸವಬಳಗ ಆಯೋಜಿಸಿದ್ದ ಶ್ರಾವಣದ ನಿಮಿತ್ತದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವ ಜ್ಯೋತಿ ಈಗ ಇನ್ನಷ್ಟು ಪ್ರಜ್ವಲವಾಗಿ ಬೆಳಗುತ್ತಿದೆ. ಬಸವಣ್ಣನ ಚಿಂತನೆಗಳು ಸಾಂಸ್ಕೃತಿಕ ಮೊತ್ತ. ಅವು ಜೀವನ ಸಂದೇಶಗಳು. ಬೆಳಕಿನಲ್ಲಿ ಬದುಕನ್ನು ಬೆಳಗಿಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು ಎಂದರು.
ಬಸವರಾಜ ಕೋರಿ ಚಿತ್ತರಗಿಯ ಡಾ. ಮಹಾಂತ ಶಿವಯೋಗಿಗಳ ನೆನಪಿನ ವ್ಯಸನಮುಕ್ತ ದಿನದ ಕುರಿತು ಮಾತನಾಡಿ, ಮನುಷ್ಯನಿಗೆ ವ್ಯಸನಗಳು ಅಂಟಿಕೊಳ್ಳುವ ಜಾಢ್ಯ. ಅವನ್ನೆಲ್ಲ ಬಿಡಿಸಿಕೊಂಡು ಸುಂದರ ಜೀವನಕ್ಕೆ ಬೇಕಾಗುವ ಮನೊಸ್ಥಿತಿ ನಮ್ಮದಾಗಬೇಕಾಗಿದೆ. ಮಹಾಂತ ಶಿವಯೋಗಿಗಳು ದುಶ್ಚಟಗಳ ಭಿಕ್ಷೆ ಬೇಡಿ, ಸದ್ಗುಣಗಳನ್ನು ಬಿತ್ತಿ ಬೆಳೆದ ಮಹಾತ್ಮರು ಎಂದರು.ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯಾ ಅಂಗಡಿ ವಚನ ಪ್ರಾರ್ಥನೆ ಹಾಡಿದರು. ರುದ್ರಗೌಡ ತೆಂಬದ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಗದೀಶ ಹತ್ತಿಕೋಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಬಸವರಾಜ ಬೆಲ್ಲದ, ಮುರಿಗೆಪ್ಪ ಕಡೆಕೊಪ್ಪ, ಮಲ್ಲಿಕಾರ್ಜುನ ಅಗಡಿ, ಕೆ.ಎಂ. ಬಿಜಾಪುರ, ಮಲ್ಲಿಕಾರ್ಜುನ ಹಿಂಚಿಗೇರಿ, ಜಗದೀಶ ಹತ್ತಿಕೋಟಿ, ಎಂ.ಬಿ. ಸತೀಶ, ಕೆ.ಎನ್. ಗುದಗಿ, ಶಿವಯೋಗಪ್ಪ ಬೆನ್ನೂರ, ಎನ್.ಬಿ. ಕಾಳೆ, ನಾಗೇಂದ್ರಪ್ಪ ಮಂಡಕ್ಕಿ, ಎನ್.ಬಿ ಕಾಳೆ, ಎಂ.ಎಸ್. ಧಾರವಾಡ, ಶಿವಾನಂದ ಹೊಸಮನಿ, ಸಿ.ಬಿ. ಇಟಗಿ, ಕಾವ್ಯಾ ಅಂಗಡಿ, ಶಿವಾನಂದ ಅಂಗಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.