ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಆಟೋ ಸಂಘದವರು ಶ್ರಮ ಜೀವಿಗಳಾಗಿದ್ದು ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ವೈಯ್ಯಕ್ತಿಕವಾಗಿ ತಾವು ನೀಡಿದ 7 ಲಕ್ಷ ರು. ದೇಣಿಗೆಯನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ಸಲಹೆ ನೀಡಿದರು.ಬುಧವಾರ ಪ್ರವಾಸಿ ಮಂದಿರದಲ್ಲಿ ಆಟೋ ಚಾಲಕರು, ಚೈತನ್ಯ ಯುವಕ ಸಂಘ, ಎಂ.ಶ್ರೀನಿವಾಸ್ ಅಭಿಮಾನಿ ಬಳಗದವರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರ ಹುಟ್ಟು ಹಬ್ಬ ಆಚರಿಸಿದ ಸಂದರ್ಭದಲ್ಲಿ ಆಟೋ ಸಂಘದವರಿಗೆ 6 ಲಕ್ಷ ರು. ಚೆಕ್ ವಿತರಿಸಿ ಮಾತನಾಡಿ, ನರಸಿಂಹರಾಜಪುರ ನನ್ನ ಹುಟ್ಟೂರಾಗಿದ್ದು ನಾನು ಇಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಆಟೋ ಕ್ಷೇಮಾಭಿವೃದ್ಧಿ ಸಂಘದವರು ಕ್ಷೇಮಾಭಿದ್ದ್ಧಿ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು. ಅಂದು 1 ಲಕ್ಷ ನೀಡಿದ್ದು ಇಂದು 6 ಲಕ್ಷ ನೀಡುತ್ತಿದ್ದೇನೆ. ಆಟೋ ಸಂಘದವರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಈ ಹಣ ಉಪಯೋಗಿಸಿಕೊಳ್ಳಬಹುದು. ಆಟೋದವರು ಶ್ರಮಜೀವಿಗಳಾಗಿದ್ದು ಕಷ್ಠ ಪಟ್ಟು ಕೆಲಸ ಮಾಡುತ್ತಾರೆ. ಈ ವರ್ಷದ ಕೊನೆಯಲ್ಲಿ ನರಸಿಂಹರಾಜಪುರ- ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದರು.ಚೈತನ್ಯ ಯುವಕ ಸಂಘದ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ. ನರಸಿಂಹರಾಜಪುರವನ್ನು ಎಂ.ಶ್ರೀನಿವಾಸ್ ಅವರು ಯಾವುದೇ ಫಲಾಫೇಕ್ಷೆ ಇಲ್ಲದೆ ಅಭಿವೃದ್ಧಿ ಪಡಿಸಿದ್ದಾರೆ. ಕಳೆದ 15 ವರ್ಷದಿಂದಲೂ ಚೈತನ್ಯ ಯುವಕ ಸಂಘದಿಂದ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಮುಂದೆ ಎಂ.ಶ್ರೀನಿವಾಸ್ ಅವರು ನಿಗಮ ಮಂಡಳಿ ಅಧ್ಯಕ್ಷರಾಗಿ ಆಗಮಿಸಲಿದ್ದಾರೆ ಎಂದರು. ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಎಂ.ಶ್ರೀನಿವಾಸ್ ಎಲ್ಲರ ಹೃದಯದಲ್ಲಿದ್ದಾರೆ. ಬಡವ, ಶ್ರೀಮಂತ, ಧರ್ಮ, ಜಾತಿ ನೋಡದೆ ಎಲ್ಲರನ್ನೂ ಒಂದೇ ರೀತಿ ಪ್ರೀತಿಯಿಂದ ಕಾಣುತ್ತಾರೆ. ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸೌಲಭ್ಯ ಸಿಗುವಂತೆ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಧು ಸೂಧನ್ ಅವರಿಗೆ 6 ಲಕ್ಷ ರು. ಚೆಕ್ ವಿತರಿಸಿದರು. ನಂತರ ಆಟೋ ಸಂಘ, ಚೈತನ್ಯ ಯುವಕ ಸಂಘ, ಎಂ.ಶ್ರೀನಿವಾಸ್ ಅಭಿಮಾನಿ ಬಳಗದವರು ಸೇರಿದಂತೆ ವಿವಿಧ ಸಂಘದಿಂದ ಎಂ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಅಭಿನವ ಗಿರಿರಾಜ್ ಕಾರ್ಯಕ್ರಮ ನಿರೂಪಿಸಿದರು.