ಮಂಗಳೂರಿನಲ್ಲಿ ಕೂಟ ಮಹಾಜಗತ್ತಿನ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಂಗಳೂರುಸಾಧನೆ ಮಾಡಿದ ಸಮಾಜದ ಪ್ರತಿನಿಧಿಗಳನ್ನು ಗುರುತಿಸಬೇಕಿದ್ದು, ಆ ಮೂಲಕ ಸಾಧಕರಿಗೆ ಪ್ರೀತಿಸಿ ತೋರಿಸಿ, ಬೆನ್ನು ತಟ್ಟುವ ಕೆಲಸ ಮಾಡಬೇಕಿದೆ ಎಂದು ಶ್ರೀ ಗುರು ನರಸಿಂಹ ದೇವಳದ ಧರ್ಮದರ್ಶಿ ಡಾ.ಕೆ.ಎಸ್. ಕಾರಂತ್ ಹೇಳಿದ್ದಾರೆ.ಕೂಟ ಮಹಾಜಗತ್ತಿನ ಮಂಗಳೂರು ಅಂಗಸಂಸ್ಥೆ ವತಿಯಿಂದ ಪಾಂಡೇಶ್ವರದ ಗುರುನರಸಿಂಹ ಸಭಾಭವನದಲ್ಲಿ ನಡೆದ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘಟನೆ ಸಮಾಜಮುಖಿಯಾಗಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರೂ ಸ್ವಾರ್ಥದ ಬಲೆಗೆ ಸಿಲುಕಿ ಒದ್ದಾಡುತ್ತಿದ್ದೇವೆ. ಅದರಿಂದ ಹೊರಕ್ಕೆ ಬರಬೇಕಾದರೆ ಸಂಘಟನೆಯಲ್ಲಿ ತೊಡಗಿಸಿಕೊಂಡು ಪರಸ್ಪರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.ಕೂಟ ಮಹಾಜಗತ್ತು ಸಂಘಟನೆಯು ವಿಸ್ತರಿಸಿಕೊಂಡಿದ್ದು, ಪ್ರಸ್ತುತ ರಾಜ್ಯಾದ್ಯಂತ 37 ಅಂಗಸಂಸ್ಥೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಸಂಘಟನೆಯನ್ನು ವಿಸ್ತಾರ ಮಾಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಅಮೆರಿಕದಲ್ಲಿ ಅಂಗ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಅಲ್ಲಿರುವ ಕೂಟ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಅಮೆರಿಕ ಅಂಗ ಸಂಸ್ಥೆ ಕಾರ್ಯಾರಂಭಿಸಲಿದೆ ಎಂದು ಕೂಟ ಮಹಾಜಗತ್ತು ಕೇಂದ್ರೀಯ ಅಧ್ಯಕ್ಷ ಎಚ್. ಸತೀಶ್ ಹಂದೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ ಮಾತನಾಡಿ, ಮಂಗಳೂರು ಅಂಗ ಸಂಸ್ಥೆಯು ಕಾರ್ಯಸೂಚಿಯನ್ನು ಹಾಕಿಕೊಂಡು ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಸಮಿತಿಯು ಅವಕಾಶ ನೀಡಿದರೆ 2026ನೇ ಕೂಟ ಸಮ್ಮೇಳನದ ಆತಿಥ್ಯವನ್ನು ಮಂಗಳೂರಿನ ಅಂಗ ಸಂಸ್ಥೆ ವಹಿಸಲು ಸಿದ್ಧವಾಗಿದೆ ಎಂದರು.‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮದಡಿ ಸಾಹಿತ್ಯ ಕ್ಷೇತ್ರದ ನಿತ್ಯಾನಂದ ಕಾರಂತ್ ಪೊಳಲಿ, ಕಾನೂನು ಕ್ಷೇತ್ರದ ಜಗದೀಶ ರಾವ್ ಟಿ., ಲೆಕ್ಕ ಪರಿಶೋಧಕ ಕ್ಷೇತ್ರದ ಕೆ.ಪ್ರಕಾಶ್ ಬಾಸ್ರಿ, ಉದ್ದಿಮೆ ಕ್ಷೇತ್ರದ ಏರುಂಬು ನಾರಾಯಣ ಕಾರಂತ್, ಹೊಟೇಲ್ ಉದ್ದಿಮೆಯ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರಿಗೆ ಕೂಟ ಸಮಾಜದ ಕಣ್ಮಣಿ ಬಿರುದು ನೀಡಿ ಗೌರವಿಸಲಾಯಿತು.
ಕೇಂದ್ರೀಯ ಕಾರ್ಯದರ್ಶಿ ಸಿ. ಸುರೇಶ್ ತುಂಗಾ, ಉದ್ಯಮಿ ಶ್ರೀ ರಘುನಾಥ್ ಸೋಮಯಾಜಿ, ಕೇಂದ್ರೀಯ ಉಪಾಧ್ಯಕ್ಷ ನ್ಯಾಯವಾದಿ ಸದಾಶಿವ ಐತಾಳ್ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಗಣೇಶ್ ಪ್ರಸಾದ್, ರಂಗನಾಥ ಐತಾಳ್, ಪ್ರವೀಣ್ ಮಯ್ಯ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಪ್ರಭಾಕರ ಐತಾಳ್, ಮ್ಯಾನೆಜರ್ ಶಿವರಾಮ ರಾವ್, ಶ್ರೀನಿವಾಸ ಐಗಲ್, ಬಾಲಕೃಷ್ಣ ಐತಾಳ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ, ಬಾಲಕೃಷ್ಣ ಮಯ್ಯ ಮತ್ತಿತರರು ಇದ್ದರು.ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ವಂದಿಸಿದರು. ಕೂಟವಾಣಿ ಪತ್ರಿಕೆಯ ಸಂಪಾದಕ ಅಡ್ಡೂರು ಕೃಷ್ಣರಾವ್ ಅವರು ಅಭಿನಂದನಾ ಭಾಷಣ ಮಾಡಿದರು. ಸಿ.ಎ. ಚಂದ್ರಮೋಹನ್ ಕೆ. ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭರತಾಂಜಲಿ ಕೊಟ್ಟಾರ ಬಳಗದವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನೃತ್ಯ ವಿದುಷಿ ದೂರದರ್ಶನ ಕಲಾವಿದೆ ಶ್ರೀಮತಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ ಭರತನಾಟ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.