ಕನ್ನಡಪ್ರಭ ವಾರ್ತೆ ಕೋಲಾರಯುವಕರು ಮತ್ತು ವಿದ್ಯಾರ್ಥಿಗಳು ಧೂಮಪಾನ, ಗುಟ್ಕಾ, ತಂಬಾಕು, ಗಾಂಜಾ, ಮದ್ಯ ಮುಂತಾದ ಮಾದಕ ವಸ್ತುಗಳನ್ನು ಬಳಸುವ ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ಕಿವಿಮಾತು ಹೇಳಿದರು. ನಗರದ ಎಸ್ಎಫ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ‘ದುಶ್ಚಟಗಳಿಂದ ದೂರವಿರಿ ಓದುವುದೇ ನಿಮ್ಮ ಗುರಿ’ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಭವಿಷ್ಯ ಹಾಳುಮಾಡಿಕೊಳ್ಳದಿರಿ
ಮಾದಕ ವಸ್ತುಗಳ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಯುವಜನತೆ ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಚಾಕೋಲೇಟ್ಗಳಲ್ಲಿ ಅಮಲು ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ಎಚ್ಚರಿಸಿದರು. ಮಾದಕ ವಸ್ತುಗಳ ಬಳಕೆ, ಸಾಗಾಣಿಕೆ, ಮಾರಾಟ ಇವುಗಳು ಕಾನೂನು ಬಾಹಿರ. ಇಂತಹ ಅಪರಾಧಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ ಇದಕ್ಕೆ ಅವಕಾಶ ಕಲ್ಪಿಸದಂತೆ ಕೋಟ್ಟಾ ಕಾಯಿದೆಯನ್ನು ಪಾಲಿಸ ಬೇಕು, ೧೮ ರಿಂದ ೨೨ ವರ್ಷದ ಯುವಕರು ಈ ವ್ಯಸನಕ್ಕೆ ಬಲಿಯಾಗಿ ಕಾರಾಗೃಹಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ. ಹಣದ ಆಸೆಗಾಗಿ ರೈತರು ಸಹ ಗಾಂಜಾವನ್ನು ಬೆಳೆದು ಅಪರಾಧಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ವಾದಕವಸ್ತು ವ್ಯಸನ ಅಪಾಯಕಾರಿ
ವಿದ್ಯಾವಂತರು ಸಹ ಒತ್ತಡಗಳಿಂದ ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಜೀವನ ಪರ್ಯಾಂತ ಮಾದಕ ವಸ್ತುಗಳ ಚಟದ ದಾಸರಾಗಿ ಕೊನೆಗೆ ಕ್ಯಾನ್ಸರ್ ಮುಂತಾದ ರೋಗಗಳಲ್ಲಿ ನರಳಾಡುವ ಮೂಲಕ ಅಂತ್ಯ ಕಾಣುವಂತಾಗುತ್ತಾರೆ ಎಂದು ವಿಷಾದಿಸಿದರು.ವಿದ್ಯಾರ್ಥಿಗಳು ಮೊಬೈಲ್ಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕೆ ಹೊರತು ಅವುಗಳಿಂದ ಹಾದಿ ತಪ್ಪುವಂತಾಗಬಾರದು. ಪುಸ್ತಕಗಳನ್ನು ಹೆಚ್ಚಾಗಿ ಓದುವ ಮೂಲಕ ಜ್ಞಾನ ಪಡೆಯಿರಿ ಎಂದರು. ಇದೇ ಸಂದರ್ಭದಲ್ಲಿ ಎನ್ಎಲ್ಎಸ್ಎ ಸಹಾಯವಾಣಿ ೧೫೧೦೦ ಬಳಕೆ ಕುರಿತು ನ್ಯಾಯಾಧೀಶರು ಮಾಹಿತಿ ನೀಡಿದರು.ಬದುಕು ರೂಪಿಸಿಕೊಳ್ಳಿಎಸ್ಎಫ್ಎಸ್ ಕಾಲೇಜಿನ ಕಾರ್ಯದರ್ಶಿ ಫಾದರ್ ವಿನೋದ್ ಕಾನತ್ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ನೀವು ಇಲ್ಲಿ ಬದುಕು ರೂಪಿಸಿಕೊಳ್ಳುವ ಆಲೋಚನೆ ಮಾಡಿ, ಶ್ರಮವಹಿಸಿ ಓದಿ ಅದು ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.ತಂಬಾಕು ನಿಯಂತ್ರಣ ಘಟಕದ ಆಪ್ತ ಸಮಾಲೋಚಕ ಪಿ.ಮೊಹಮ್ಮದ್ ಮಾತನಾಡಿ, ಶಾಲೆ ಕಾಲೇಜು ಆವರಣದಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದೆ, ಒಂದೆರಡು ವರ್ಷ ಕಷ್ಟಪಟ್ಟು ಓದಿ ಇಡೀ ಜೀವನ ಸುಖಕರವಾಗಿರುವಂತೆ ಬಾಳಿ, ಕೇವಲ ಕ್ಷಣಿಕ ಸುಖದ ಆಸೆಗಾಗಿ ದುಶ್ಚಟಗಳಿಗೆ ಬಲಿಯಾದರೆ ಇಡೀ ಜೀವನ ನರಕವಾದೀತು ಎಂದರು.ಈ ವೇಳೆ ಈಜಲ-ಈನೆಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಹಾಗೂ ಅರೆಕಾಲಿಕ ಕಾನೂನು ಸ್ವಯಂ ಸೇವಕ ವೆಂಕಟಾಚಲಪತಿ, ಹಿರಿಯ ಉಪನ್ಯಾಸಕ ರವಿಚಂದ್ರ, ಸಂವಹನ ಸಂಸ್ಥೆಯ ಮಂಜುನಾಥ್ ಇದ್ದರು.