ಹಾನಗಲ್ಲ: ಮನಸ್ಸು ವೈಮನಸ್ಸಾಗುವುದು ಬೇಡ, ತಾರತಮ್ಯದಿಂದ ಸಾಮಾಜಿಕ ವಾತಾವರಣ ಹದಗೆಡುವುದು ಬೇಡ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಅನ್ಯೋನ್ಯವಾಗಿ ಬದುಕುವುದೇ ನಮ್ಮೆಲ್ಲರ ಸಂಕಲ್ಪವಾಗಬೇಕಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.
ಮೇಲು-ಕೀಳು ಭಾವನೆ ಸಮಾಜವನ್ನು ಇನ್ನಷ್ಟು ಕುಗ್ಗಿಸಲಿದೆ. ಎಲ್ಲರೂ ಒಂದಾಗಿ ಬದುಕಿದರೆ ಶಕ್ತಿ ಹೆಚ್ಚಲಿದೆ. ಜಾತಿ, ಮತ, ಪಂಥಗಳನ್ನು ಒಗ್ಗೂಡಿಸಿ ಮುನ್ನಡೆಸದಿದ್ದರೆ ಸಮಾಜ ಛಿದ್ರಗೊಳ್ಳುವ ಆತಂಕ ಹೆಚ್ಚಿದೆ. ಕುಟೀಲ ಸಾಮಾಜಿಕ ನೀತಿಗಳನ್ನು ಕೈಬಿಟ್ಟು ಸಮಾಜ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಹೇಳಿದ ಅವರು ಕಾಲ ಬದಲಾದಂತೆ ಅಂತರ್ಜಲ ಕುಸಿಯುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಅರಿತುಕೊಳ್ಳಬೇಕಿದೆ. ಅಮೂಲ್ಯ ಜೀವಜಲವನ್ನು ಮುಂದಿನ ಪೀಳಿಗೆವರೆಗೆ ಸಂರಕ್ಷಿಸಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಸನೂರಿನ ತಿಪಯ್ಯಸ್ವಾಮಿ ಆಶ್ರಮದ ಜ್ಯೋತಿರ್ಲಿಂಗಾನಂದ ಸ್ವಾಮೀಜಿ ಮಾತನಾಡಿ, ಅತ್ಯಾಚಾರ, ಅನಾಚಾರಗಳಿಗೆ ಲಗಾಮು ಹಾಕುವ ಅಗತ್ಯವಿದ್ದು, ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ-ಬೆಳೆಸುವ ಕಾರ್ಯ ನಡೆಯಬೇಕಿದೆ. ಸಂಸಾರಿಕ ಮತ್ತು ವ್ಯವಹಾರಿಕ ಜಂಜಾಟಗಳು ಇಂದು ಪ್ರತಿಯೊಬ್ಬರ ಅಮೂಲ್ಯ ಜೀವನದಲ್ಲಿ ನೆಮ್ಮದಿ ದೂರ ಮಾಡಿವೆ. ಅಶಾಂತಿ, ಅಸಹನೆ, ಅಸಮಾಧಾನ ಎಲ್ಲರ ಮನೆ, ಮನಗಳಲ್ಲಿ ಮೂಡುತ್ತಿದ್ದು ಇಂತಹ ಆಂತರಿಕ ತೊಳಲಾಟಗಳಿಗೆ ಮುಕ್ತಿ ನೀಡಬೇಕಿದೆ ಎಂದರು.ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಮುಖಂಡರಾದ ಮಧು ಪಾಣಿಗಟ್ಟಿ, ಶಿವಯೋಗಯ್ಯ ಹಿರೇಮಠ, ಕರೆಗೌಡ ಚನ್ನಗೌಡ್ರ, ಹವಳಪ್ಪ, ಆರ್.ಬಿ. ಪಾಟೀಲ, ಪುಟ್ಟನಗೌಡ ಮಾಳಗಿ, ಶ್ರೀಕಾಂತಗೌಡ ಪುಟ್ಟನಗೌಡ್ರ, ಮಾಲತೇಶ ಕೊಟ್ಟಣದ ಇದ್ದರು.