ರಾಮನಗರ: ಭಕ್ತ ಕನಕದಾಸರು ಕರೆ ನೀಡಿರುವಂತೆ ಕುಲ ಕುಲವೆಂಬ ಹೊಡೆದಾಟ, ಬಡಿದಾಟ ಬೇಡಾ, ಸಮಾಜದಲ್ಲಿ ಜಾತಿ ಸಂಸ್ಕೃತಿಯನ್ನು ತಿರಸ್ಕರಿಸಿ ನೀತಿ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್ ಕರೆ ನೀಡಿದರು.
ಸಂತ ಶ್ರೇಷ್ಠರಾದ ಕನಕದಾಸರು ಅಪಾರ ಜ್ಞಾನಿಗಳು, ತತ್ವಜ್ಞಾನಿಗಳಾಗಿದ್ದವರು. ಅವರಲ್ಲಿನ ಜ್ಞಾನದ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳು, ಅಸಮಾನತೆ, ಅಜ್ಞಾನಗಳನ್ನು ತೊಡೆದು ಹಾಕಲು ಕೀರ್ತನೆಗಳನ್ನು ರಚಿಸಿ, ಅವುಗಳನ್ನು ಹಾಡುವುದರ ಮೂಲಕ ಸಮಾಜದಲ್ಲಿನ ಅನ್ಯಾಯಗಳನ್ನು ಧಿಕ್ಕರಿಸಿದರು. ಈ ಮೂಲಕ ಅವರು ನಮಗೆಲ್ಲಾ ಸ್ಫೂರ್ತಿ ದಾಯಕರಾಗಿದ್ದಾರೆ. ಅಂಥವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ಈ ನಾಡಿನಲ್ಲಿ ಮಹಾನ್ ಸಾಧನೆಗಳನ್ನು ಮಾಡಿದಂತಹ ಅನೇಕ ಮಹನೀಯರಲ್ಲಿ ಭಕ್ತ ಕನಕದಾಸರು ಒಬ್ಬರು. ಅಂದಿನ ಸಮಾಜದಲ್ಲಿ ತಳ ಸಮುದಾಯದವರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳು, ಜಾತಿ ಪದ್ದತಿಯನ್ನು ಹೋಗಲಾಡಿಸುವ ಸಲುವಾಗಿ ರಾಜ್ಯದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಅಂದು ಪ್ರಚಲಿತದಲ್ಲಿದ್ದ ಹಲವಾರು ಅನಿಷ್ಟ ಪದ್ದತಿಗಳ ವಿರುದ್ದ ಜನರಲ್ಲಿ ಜಾಗೃತಿ ನೋಡಿಸುವ ಕೆಲಸ ಮಾಡಿದ್ದಾರೆ, ಅವರ ಭಕ್ತಿಗೆ ಅವರೇ ಸಾಟಿ, ಹಾಗಾಗಿ ಭಕ್ತಿಗೆ ಇನ್ನೊಂದು ಹೆಸರೇ ಸಂತ ಶ್ರೇಷ್ಠ ಭಕ್ತ ಕನಕದಾಸರು ಎಂದರು.ಕನಕದಾಸರು ತಮ್ಮ ಜೀವನದುದ್ದಕ್ಕೂ ಭಕ್ತಿ ಗೀತೆಗಳು, ದಾಸ ಗೀತೆಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಅವರು ತಮ್ಮ ಜೀವನದ ಸುಖವನ್ನು ತೊರೆದು ಸಮಾಜಕ್ಕೆ ತಮ್ಮನ್ನೇ ಅರ್ಪಣೆ ಮಾಡಿಕೊಂಡಂತಹ ಶ್ರೇಷ್ಠ ದಾಸರು ಎಂದು ಅವರು ಹೇಳಿದರು.
ಕರ್ನಾಟಕದ ಪರಂಪರೆಯಲ್ಲಿ ಸಾವಿರಾರು ಕೋಟೆ ಕೊತ್ತಲೆಗಳು, ರಾಜ ಮನೆತನಗಳು ಮತ್ತು ಸಾಮ್ರಾಜ್ಯಗಳು ಆಳಿ, ಅಳಿದು ಹೋಗಿವೆ ಇಂತಹ ಒಂದು ಪರಂಪರೆಯಲ್ಲಿ ನಾವು ಅತ್ಯಂತ ಹೆಮ್ಮೆಯಿಂದ, ಘನತೆಯಿಂದ ಕೆಲವಾರು ಹೆಸರುಗಳನ್ನು ಬರೆಯುವುದಕ್ಕೆ ಸಾಧ್ಯ, ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಶ್ರೇಷ್ಠ ವ್ಯಕ್ತಿ ಕನಕದಾಸರು. ಸಮಾಜಕ್ಕೆ ಅವರ ಕೊಡುಗೆ ಅತ್ಯದ್ಭತವಾದದ್ದು ಎಂದರು.
ಕನಕದಾಸರ ವಿಶೇಷತೆ ಎಂದರೆ ಅವರು ಕೇವಲ ದಾಸರಲ್ಲ ಮತ್ತು ಕೀರ್ತನಕಾರರಲ್ಲ ಅವರೊಬ್ಬ ಕವಿಯು ಹೌದು. ಬಟ್ಟೆಯನ್ನು ತೊಳೆದು ಮಡಿಯಲ್ಲ ಕಾಮಕ್ರೋದಗಳನ್ನು ಕಳೆದುಕೊಳ್ಳುವುದೇ ಮಡಿ ಎಂದು ತಿಳಿಸಿಕೊಟ್ಟ ವ್ಯಕ್ತಿ. ಕರ್ನಾಟಕ ಎಂದರೆ ಕನಕ ಎಂದು ಹೇಳುವಷ್ಟರ ಮಟ್ಟಿಗೆ ವಿಷಯ ವಿಚಾರಧಾರೆಗಳನ್ನು ತಿಳಿಸಬೇಕು ಎಂದವರು ಹೇಳಿದರು.
ರಾಮನಗರ ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲೆಯ ಅಪರ ಪೋಲಿಸ್ ಅಧೀಕ್ಷಕ ರಾಜೇಂದ್ರ, ಜಿಲ್ಲಾ ಪಂಚಾಯತ್ ನ ಸಹಾಯಕ ಕಾರ್ಯದರ್ಶಿ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸತೀಶ್, ಸಮುದಾಯದ ಮುಖಂಡರು ಹಾಗೂ ಗಣ್ಯರಾದ ರೇಣುಕಪ್ಪ, ಶಿವಶಂಕರ್ ನಾರಾಯಣಪ್ಪ, ಸಿದ್ದೇಗೌಡ, ಗೋಪಾಲ್, ಬಸವರಾಜು, ಚಲುವರಾಜ್, ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
8ಕೆಆರ್ ಎಂಎನ್ 2,3.ಜೆಪಿಜಿ
3.ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಂತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.