ಕಾರವಾರ: ಜಿಲ್ಲೆಯ ಮುಂಡಗೋಡ ತಾಲೂಕಿನ ಕೋಡಂಬಿ ಗ್ರಾಪಂ ವ್ಯಾಪ್ತಿಯ ರಾಮಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗ್ರಾಪಂ ಹಾಗೂ ಅರಣ್ಯ ಇಲಾಖೆ ಒಗ್ಗೂಡಿಸುವಿಕೆಯಡಿ ಅಂದಾಜು ₹3 ಲಕ್ಷ ವೆಚ್ಚದಲ್ಲಿ 400 ಕಾಂಟೂರ ಟ್ರಂಚ್ ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಸಮುದಾಯ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸ ನಿರ್ವಹಿಸುವಂತೆ ಗ್ರಾಮೀಣ ಕೂಲಿಕಾರರನ್ನು ಪ್ರೇರೇಪಿಸುವ ಉದ್ದೇಶದಿಂದ ನೀರು ಸರಾಗವಾಗಿ ಹರಿದುಹೋಗಲು ಕಂದಕ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.
ಕಾಮಗಾರಿ ಸ್ಥಳದಲ್ಲಿ ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಂಗಳವಾರ ಐಇಸಿ ಚಟುವಟಿಕೆಗಳಡಿ ರೋಜಗಾರ ದಿವಸ ಆಚರಣೆ ಹಾಗೂ ನರೇಗಾ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಟೂರ ಟ್ರಂಚ್ ತೆಗೆಯುವ ಕಾಮಗಾರಿ ಮುಗಿದ ನಂತರ, ಗ್ರಾಮ ಪಂಚಾಯಿತಿಯಿಂದ ಮಳೆನೀರು ಕೊಯ್ಲು, ಕೊಳವೆ ಬಾವಿ ಮರುಪೂರಣ ಘಟಕ, ಕೆರೆ ಕಾಮಗಾರಿಯಂತಹ ಸಮುದಾಯ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರ ಬೇಡಿಕೆಯಂತೆ ನಿರಂತರ ಕೂಲಿ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಪ್ರತಿಯೊಬ್ಬರೂ ನರೇಗಾದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಹಳ್ಳಿಗಾಡು ಬಡ ಜನರಿಗೆ ಗ್ರಾಮ ಪಂಚಾಯಿತಿಯಿಂದ ನರೇಗಾದಡಿ ಕೂಲಿ ಕೆಲಸದ ಜತೆಗೆ ವೈಯಕ್ತಿಕ ಕಾಮಗಾರಿ ವಿಭಾಗದಲ್ಲಿ ಅಡಕೆ, ಪಪ್ಪಾಯಿ, ಮಾವು, ಚಿಕ್ಕು, ದಾಳಿಂಬೆ, ಪೇರಲ, ಕಾಳುಮೆಣಸು, ಗುಲಾಬಿ, ಮಲ್ಲಿಗೆ, ಡ್ರ್ಯಾಗನ್ ಫ್ರುಟ್ ಬೆಳೆ, ಮಳೆ ನೀರು ಕೊಯ್ಲು, ಕೊಳವೆ ಬಾವಿ ಮರುಪೂರಣ ಘಟಕ, ಕೃಷಿ ಬಾವಿ, ದನ, ಕೋಳಿ, ಕುರಿ, ಮೇಕೆ ಶೆಡ್ ನಿರ್ಮಾಣದಂತಹ ಕಾಮಗಾರಿಗಳು ಲಭ್ಯವಿದ್ದು, ಗ್ರಾಮಸ್ಥರು ಸ್ವಇಚ್ಛೆಯಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದರು.
ಆರ್ಎಫ್ಒ ಸುನಿಲ್ ಆರ್ ಹೊನ್ನಾವರ, ತಾಂತ್ರಿಕ ಸಹಾಯಕ ಎಂಜಿನಿಯರ್ ಬಸವರಾಜ ಪಾಟೀಲ, ಗ್ರಾಪಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಇದ್ದರು.