ಕೌಟುಂಬಿಕ ವ್ಯವಸ್ಥೆಗೆ ಮಹಿಳೆಯರು ಮಾದರಿಯಾಗಲಿ: ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶ ಬಿ.ಎನ್. ಅಮರನಾಥ್

KannadaprabhaNewsNetwork |  
Published : Apr 29, 2024, 01:32 AM IST
ಫೊಟೋ-೧ ಅರಸೀಕೆರೆ ನಗರದ ನ್ಯಾಯಾಲಯ ಆವರಣದಲ್ಲಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಅನಿತಾ ಮಾತನಾಡಿದರು | Kannada Prabha

ಸಾರಾಂಶ

ಅರಸೀಕೆರೆಯ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಎನ್‌.ಅಮರನಾಥ್ ಮಾತನಾಡಿದರು.

ನ್ಯಾಯಾಂಗ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಶಿಕ್ಷಣ ಕಲಿತ ಹೆಣ್ಣು ಮಗಳು ಕುಟುಂಬ ಹಾಗೂ ಸಮಾಜಕ್ಕೆ ಗುರುವಾಗುವ ಮೂಲಕ ಕೌಟಂಬಿಕ ವ್ಯವಸ್ಥೆಗೆ ಮಾದರಿಯಾಗಬಲ್ಲಳು. ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಗುತ್ತಿರುವುದು ಸ್ವಾಗತಾರ್ಹ ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಎನ್‌.ಅಮರನಾಥ್ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ‘ಹೆಣ್ಣೊಂದು ಕಲಿತರೆ ಮನೆಯಲ್ಲಿ ಒಂದು ಶಾಲೆ ತೆರೆದಂತೆ. ಹಂತ ಹಂತವಾಗಿ ಮಹಿಳೆಯರಿಗೆ ನ್ಯಾಯ ಸಿಗಲು ಪ್ರಾರಂಭವಾಗಿದೆ. ಈ ಬೆಳವಣಿಗೆಯಿಂದ ತಮ್ಮ ಹಕ್ಕುಗಳನ್ನು ಪಡೆಯಲು ಸಾದ್ಯವಾಗುತ್ತಿದೆ. ತಾನು ಹುಟ್ಟಿ ಬೆಳೆದ ಮನೆಗೆ ಮಗಳಾಗಿ, ಮದುವೆ ನಂತರ ಗಂಡನ ಮನೆಯಲ್ಲಿ ಸೊಸೆಯಾಗಿ ನಿಜವಾದ ಜವಾಬ್ದಾರಿಯೊಂದಿಗೆ ಕರ್ತವ್ಯ ಅರಿತು ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೀವನ ರೂಪಿಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

‘ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಮಹಿಳೆಯರು ಸಾಧನೆ ಮತ್ತು ಯಶಸ್ಸಿನೊಂದಿಗೆ ಗುರುತರ ನೆನಪುಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳು ಕೌಟಂಬಿಕ ವ್ಯವಸ್ಥೆಯಲ್ಲಿ ಜ್ಞಾನವಂತೆಯಾಗಿ ಹಿರಿಯ ಕಿರಿಯರೊಂದಿಗೆ ಉತ್ತಮ ಭಾಂದವ್ಯವನ್ನು ಉಳಿಸಿ ಬೆಳೆಸುವಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಮಾದರಿ ಹೆಣ್ಣುಮಗಳಾಗುವುದರ ಮೂಲಕ ಬೇರೆಯವರಿಗೂ ಉತ್ತೇಜನಕಾರಿ ಆಗಲು ಸಾದ್ಯವಿದೆ. ಕಳೆದ ಬಾರಿ ನ್ಯಾಯಾಂಗ ಇಲಾಖೆ ಮೂಲಕ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಅರಸೀಕೆರೆಗೆ ಪ್ರಥಮ ಸ್ಥಾನ ದೊರೆತಿದೆ. ಈ ಯಶಸ್ಸಿನ ಹಿಂದೆ ಎಲ್ಲ ವಕೀಲರ ಪಾತ್ರವಿದ್ದು, ಮುಂದಿನ ದಿನಗಳಲ್ಲಿ ಇದೇ ರಿತೀಯ ಸಹಕಾರ ಇರಲಿ’ ಎಂದು ತಿಳಿಸಿದರು.

ಅಪರ ಸಿವಿಲ್ ನ್ಯಾಯಾಧೀಶ ರಫೀಕ್ ಆಹಮದ್ ಮಾತನಾಡಿ, ‘ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಲಾಗಿದೆ ಮತ್ತು ನೀಡಲಾಗುತ್ತಿದೆ. ಈ ಹಕ್ಕುಗಳ ಮೂಲಕ ಹೆಚ್ಚು ಜವಾಬ್ದಾರಿಗಳನ್ನು ಹೊಂದುತ್ತಿರುವ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಸಾಧನೆ ಗುರುತುಗಳನ್ನು ಮೂಡಿಸುತ್ತಿದ್ದಾರೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಎಷ್ಟು ಜಾಗ್ರತೆಯಾಗಿ ಸದುಪಯೋಗ ಮಾಡಿಕೊಳ್ಳುತ್ತಾರೆಯೋ ಅಲ್ಲಿ ಆರೋಗ್ಯಕರ ಸಂಬಂಧ ಮತ್ತು ವಾತಾವರಣವನ್ನು ಕಾಣಬಹುದಾಗಿದೆ. ಹಕ್ಕುಗಳನ್ನು ಆರೋಗ್ಯಕರವಾಗಿ ಸದುಪಯೋಗ ಮಾಡಿಕೊಂಡಲ್ಲಿ ಸಾರ್ಥಕತೆ ಸಿಗುತ್ತದೆ. ಪುರುಷ ಸಮಾನವಾಗಿ ಗುರುತಿಸಿಕೊಳ್ಳುತ್ತಿರುವ ಮಹಿಳೆಯರು ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗುರುವಾಗಿ, ಸ್ನೇಹಿತೆಯಾಗಿ, ಸಹೋದರಿಯಾಗಿ, ತಾಯಿಯಾಗಿ, ಮಗಳಾಗುವುದರ ಮೂಲಕ ಕುಟುಂಬದ ಒಬ್ಬ ಮಗನ ಸ್ಥಾನದಲ್ಲಿ ತೊಡಗಿಸಿಕೊಂಡು ಮಾನವೀಯ ಮೌಲ್ಯಗಳನ್ನು ತಮ್ಮದಾಗಿಸಿಕೊಳಬಹುದಾಗಿದೆ. ಪುರುಷರು ಕೂಡ ಪ್ರಸ್ತುತ ಬೆಳವಣಿಗೆಗಳನ್ನು ಸ್ವೀಕರಿಸುವ ಮೂಲಕ ಹೆಣ್ಣಿಗೆ ಹೆಚ್ಚಿನ ಸಹಕಾರ ನೀಡಿದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ನ್ಯಾಯಧೀಶರಾದ ಜಿ.ಅನಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಜಿ ರೂಪರಾಜ್, ಕಾರ್ಯದರ್ಶಿ ಜಿ.ಕೃಷ್ಣಮೂರ್ತಿ, ಹಿರಿಯ ವಕೀಲರಾದ ಕಲ್ಗುಂಡಿ ಹಿರಿಯಣ್ಣ, ವೈ.ಬಿ.ಚಂದ್ರಶೇಖರ್, ಆರ್.ವಿಜಯ ಕುಮಾರ್, ಸಿದ್ದಮಲ್ಲಪ್ಪ, ಪಿ.ನಟರಾಜು ಮಾತನಾಡಿದರು.

ಮಹಿಳಾ ವಕೀಲರಾದ ಅಮೂಲ್ಯ ನಿರೂಪಣೆ, ಪ್ರೀತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಎಸ್ ಮಲ್ಲೇಶ್, ಕೆ.ಎಸ್. ಲೋಕೇಶ್ ಕುಮಾರ್, ಎಂ.ಆರ್ ಸರ್ವೇಶ್, ರವಿ, ಒ.ಎ ಶಿವಕುಮಾರ್, ಸವಿತಾ, ಗೀತಾ, ಶ್ವೇತಾ, ಉಮಾದೇವಿ, ಮಮತ, ರೋಜಾ, ಲಕ್ಷ್ಮೀ ಇದ್ದರು.

ಅರಸೀಕೆರೆ ನಗರದ ನ್ಯಾಯಾಲಯ ಆವರಣದಲ್ಲಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಅನಿತಾ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌