ಅಂತಾರಾಷ್ಟ್ರೀಯ ಮಹಿಳಾ ದಿನ । ವಿವಿಧ ಮಹಿಳಾ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಸುರಪುರಒಂದಾನೊಂದು ಕಾಲದಲ್ಲಿ ಮನೆಯ ಹೊಸಲು ದಾಟಲಾರದ ಪರಿಸ್ಥಿತಿಯಿಂದ ಹೊರಬಂದು ಬಾಹ್ಯಾಕಾಶಕ್ಕೆ ಹಾರುವ ಮಟ್ಟಿಗೆ ಮಹಿಳೆಯರು ಬೆಳೆದಿದ್ದಾರೆ. ಇದು ಇನ್ನಷ್ಟೂ ಎತ್ತರಕ್ಕೆ ಬೆಳೆಯಬೇಕು ಎಂದು ರಾಜ್ಯ ಮಹಿಳಾ ಸಹಕಾರಿ ಮಹಾ ಮಂಡಳಿ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹೇಳಿದರು.
ನಗರದ ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದ ಆವರಣದಲ್ಲಿ ಶನಿವಾರ ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘದಿಂದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಕುಟುಂಬದ ನಿರ್ವಹಣೆ ಜೊತೆಗೆ ಉದ್ಯೋಗದ ಜವಾಬ್ದಾರಿ ಕೂಡ ಅನೇಕರು ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಶಿಕ್ಷಣದ ಜತೆಗೆ ವಿಶೇಷ ತರಬೇತಿ ಪಡೆಯಬೇಕು. ಆ ಮೂಲಕ ಉದ್ಯೋಗ ನಿರ್ವಾಹಣೆಯಿಂದ ಆರ್ಥಿಕ ಪ್ರಗತಿ ಸಾಧಿಸಿ ಸಬಲರಾಗಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ಮಾತನಾಡಿ, ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಹಾಗೂ ಹೊಲಿಗೆ ತರಬೇತಿ ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ವಿವಿಧ ಕ್ಷೇತ್ರದ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಶಕುಂತಲಾ ಬೆಲ್ದಾಳೆ ಅವರನ್ನು ರಾಜ್ಯ ಮಟ್ಟದ ಅಕ್ಕಮಹಾದೇವಿ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ, ಭಾಷಣ, ಗಾಯನ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶೃತಿ ಹಿರೇಮಠ ನಿರೂಪಿಸಿ ವಂದಿಸಿದರು.
ಜಿಲ್ಲಾ ಸಹಕಾರಿ ಒಕ್ಕೂಟ ಯುನಿಯನ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ದರ್ಶನಾಪೂರ, ಒಕ್ಕೂಟದ ನಿರ್ದೇಶಕ ಕೆಂಚಪ್ಪ ನಗನೂರು, ವೃತ್ತಿಪರ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ, ಪ್ರಮುಖರಾದ ಶಾಂತಗೌಡ ಪಾಟೀಲ್, ಶಂಕರಗೌಡ ಪಾಟೀಲ್, ಸಹಕಾರಿ ಸಂಘದ ಅಧ್ಯಕ್ಷೆ ಚನ್ನಮ್ಮ ಪ್ರಕಾಶ ಅಂಗಡಿ, ಉಪಾಧ್ಯಕ್ಷೆ ನೀಲಾಂಬಿಕೆ ಸಿದ್ದನಗೌಡ ಪಾಟೀಲ್, ನಿರ್ದೇಶಕರಾದ ಸುನೀತಾ ಸಿದ್ದನಗೌಡ ಪಾಟೀಲ್, ಪ್ರಿಯಾಂಕ ನವೀನ ಜುಜಾರೆ, ಸೌಭಾಗ್ಯಾ ಪ್ರವೀಣ ಜುಜಾರೆ, ಮೇಘಾ ದಾಯಿಪುಲ್ಲೆ, ಶೃತಿ ಹಿರೇಮಠ ಇತರರು ಇದ್ದರು.