ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಛಾಪುಮೂಡಿಸಲಿ

KannadaprabhaNewsNetwork | Published : Mar 9, 2025 1:49 AM

ಶಿವಮೊಗ್ಗ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಾಧನೆ ಶಿಖರವನ್ನು ಏರಬೇಕು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಕರೆ ನೀಡಿದರು.

ಶಿವಮೊಗ್ಗ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಾಧನೆ ಶಿಖರವನ್ನು ಏರಬೇಕು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಕರೆ ನೀಡಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಇತಿಹಾಸದಲ್ಲಿ ಮಹತ್ವವಾದ ಸ್ಥಾನ ಇದೆ. ಶತಮಾನಗಳಿಂದ ಸಾಕಷ್ಟು ಸಮಸ್ಯೆಗಳ ವಿರುದ್ಧ ಸಂಘಟನೆ ಕಟ್ಟಿಕೊಂಡು ಹೋರಾಡುತ್ತಾ ಬಂದಿದ್ದಾರೆ. ಅದರಿಂದ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅದರ ಜೊತೆ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾ ಬಂದಿರುವ ಅವರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಒಂದು ಕುಟುಂಬ ಚೆನ್ನಾಗಿ ಇರಬೇಕೆಂದರೆ ಮಹಿಳೆ ಚೆನ್ನಾಗಿ ಇರಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನನಾಡಿ ಕಾರ್ಯಕರ್ತರು ಮಾಡಿದ ಕೆಲಸ ಅವಿಸ್ಮರಣೀಯ. ಇಂತಹ ಒಳ್ಳೆಯ ಕಾರ್ಯವನ್ನು ಗುರುತಿಸುವುದು ನಮ್ಮ ಸಮಾಜದ ಕರ್ತವ್ಯವಾಗಿದ್ದು, ಈ ಮೂಲಕ ಅವರೆಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.ಕುವೆಂಪು ವಿವಿಯ ಎನ್‌ಎಸ್‌ಎಸ್ ನ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಉಪನ್ಯಾಸ ನೀಡಿ, ಮಹಿಳೆಯರು ಎಂದ ಕೂಡಲೆ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆ ದೇವಿಯ ಚಿತ್ರಣ. ನಮ್ಮ ಭಾರತವೇ ಹೆಣ್ಣನ್ನು ಗೌರವಿಸುವ ಸಂಸ್ಕೃತಿಯ ಹೊಂದಿದ್ದು, ಹೆಣ್ಣು ಇಲ್ಲದಿದ್ದರೆ ಸಮಾಜವೇ ಮುಂದುವರೆಯಲು ಆಗದು. ಹೆಣ್ಣಿನ ದನಿಯು ಪ್ರತಿ ವಲಯದಲ್ಲೂ ದಾಖಲಿಸಬೇಕು. ಮಹಿಳೆಯರು ತಮ್ಮ ಮಾತುಗಳಿಂದ ಅವರ ಅಸ್ಮಿತೆಯನ್ನು ಕಳೆದುಕೊಳ್ಳದೆ ಎಚ್ಚರವಹಿಸಬೇಕು ಎಂದರು.ಪ್ರಸ್ತುತದ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದೆ ಉದ್ಯೋಗ ಸ್ಥಳ, ಶಾಲಾ-ಕಾಲೇಜು ಒಳಗೊಂಡಂತೆ ಎಲ್ಲ ಹಂತದಲ್ಲೂ ದೌರ್ಜನ್ಯ ನಡೆಯುತ್ತಿದೆ. ನಾವೆಲ್ಲರೂ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನಾಡಿ ಕಾರ್ಯಕರ್ತರು ಇಂತಹ ಕೃತ್ಯದ ಬಗ್ಗೆ ಮನೆ ಮನೆಗೆ ತಿಳಿಸಿ ಜಾಗೃತಿ ಮೂಡಿಸಬೇಕು. ಆ ಮೂಲಕ ಹೆಣ್ಣು ತನ್ನ ಸ್ವಸಾಮರ್ಥ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದರು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ನಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಡಿಎಚ್‌ಒ ಡಾ.ನಟರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ನಿರೂಪಣಾಧಿಕಾರಿ ಡಾ.ಎಚ್.ಸಂತೋಷ್ ಕುಮಾರ್, ಬಾಲನ್ಯಾಯ ಮಂಡಳಿಯ ರೇಖಾ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.