ಕನ್ನಡಪ್ರಭ ವಾರ್ತೆ, ಬೆಂಗಳೂರು
ದೇಶದ ಅಭಿವೃದ್ದಿ ಅಳೆಯುವಾಗ ಮಹಿಳೆಯರ ಅಭಿವೃದ್ದಿ ಪ್ರಮಾಣ ಮಾನದಂಡವಾಗಬೇಕು ಎಂದು ದಶಕಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನುಡಿದ ಮಾತುಗಳು ಇಂದಿಗೆ ಪ್ರಸ್ತುತವಾಗಿವೆ ಎಂದು ಸಂಸ್ಕೃತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.ಭಾನುವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ರಂಗ ಪರಿಷತ್ ಕೇಂದ್ರ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಶ್ವಿನಿ ಮದನಕರ ಅವರ ‘ರಮಾಬಾಯಿ ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರತಿ ಪುರುಷ ಸಾಧಕನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿಗಿಂತ ಪ್ರತಿ ಪುರುಷ ಸಾಧಕನ ಜೊತೆಯಾಗಿ ಮಹಿಳೆ ಇರುತ್ತಾಳೆ ಎಂಬ ಮಾತಿಗೆ ನಿಜವಾದ ಅರ್ಥವಿದೆ. ಎಷ್ಟೋ ಪುರುಷ ಹೋರಾಟಗಾರರು ಹಾಗೂ ಸಾರ್ವಜನಿಕ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತವರು ಮಹಿಳೆಯರು. ಸಾಮಾಜಿಕ ಮತ್ತು ಸಂಸಾರಿಕ ಜೀವನವನ್ನು ಸಮಾನವಾಗಿ ತೂಗಿಸಿಕೊಂಡು ಹೋಗುವಲ್ಲಿ ಅವರ ಪಾತ್ರ ದೊಡ್ಡದು ಎಂದರು.ರಮಾಬಾಯಿ ಅಂಬೇಡ್ಕರ್ ಸಮಾನ ಸಾಧಕಿ, ತಾತ್ವಿಕ ಬದ್ಧತೆ ಉಳ್ಳವರು. ಪುರುಷ ಹೋರಾಟಗಳು ಕೇವಲ ಆಯ್ದ ಸತ್ಯದ ಅನುಭವಗಳು. ಹೀಗಾಗಿ, ಮನೆಯಲ್ಲಿನ ಮಹಿಳೆಯರ ಅಜ್ಞಾತ ವಲಯ ಅನಾವರಣಗೊಳ್ಳಬೇಕು. ಅವರ ಅನುಭವಗಳು ಸೇರಿಸಿದಾಗ ಮಾತ್ರ ಒಬ್ಬ ಸಾಧಕನ ಜೀವನ ಚರಿತ್ರೆ ಪೂರ್ಣಗೊಳ್ಳುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಈ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿರುವ ನಯನ ರಂಗಮಂದಿರದ ನೌಕರ ನಯನ ರಾಜು ಅವರನ್ನು ಸನ್ಮಾನಿಸಲಾಯಿತು.ಚಿತ್ರ ಕಲಾವಿದ ಡಾ.ಎಂ.ಎಸ್. ಮೂರ್ತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪಾ, ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್, ಬರಹಗಾರ ವಿ.ಎಲ್. ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.