ಕಂಪ್ಲಿ: ಪೂರ್ವಜರಲ್ಲಿದ್ದ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶ್ರದ್ಧೆಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ ಎಂದು ತಹಸೀಲ್ದಾರ್ ಜೂಗಲ ಮಂಜು ನಾಯಕ ಹೇಳಿದರು.
ಪಟ್ಟಣದ ಷಾ. ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನದ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಭಾರತ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ದೇಶ ಭಕ್ತರು, ಹೋರಾಟಗಾರರು, ನಾಗರಿಕರು ತಮ್ಮ ಪ್ರಾಣ ತ್ಯಾಗ, ಬಲಿದಾನಗೈದಿದ್ದಾರೆ ಎಂದು ಹೇಳಿದರು.ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಪ್ರಗತಿ ಮತ್ತು ಉನ್ನತಿಗೆ ನಾವೆಲ್ಲರೂ ನಮ್ಮಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಸಹಕರಿಸುವಂತಾಗಬೇಕು. ಇದು ಸ್ವಾತಂತ್ರ್ಯೋತ್ಸವಕ್ಕೆ ನೀಡುವ ಕೊಡುಗೆಯಾಗಲಿದೆ ಎಂದರು.ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ತ್ಯಾಗ, ಬಲಿದಾನ ಹಾಗೂ ದೇಶಕ್ಕಾಗಿ ಸಮರ್ಪಣಾಭಾವದಿಂದ ಹೋರಾಡಿದ ರಾಷ್ಟ್ರನಾಯಕರು ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು ಎಂದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್ ಮತ್ತು ಪುರಸಭೆ ಸದಸ್ಯರು, ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ. ದಾನಪ್ಪ, ತಾಪಂ ಇಒ ಆರ್.ಕೆ. ಶ್ರೀಕುಮಾರ್, ಎಡಿ ಕೆ.ಎಸ್. ಮಲ್ಲನಗೌಡ, ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಆರಕ್ಷಕ ನಿರೀಕ್ಷಕ ಕೆ.ಬಿ. ವಾಸುಕುಮಾರ್, ಡಿಟಿ ಬಿ. ರವೀಂದ್ರಕುಮಾರ್, ಪ್ರಾಚಾರ್ಯೆ ಸುಜಾತಾ, ಪ್ರಮುಖ ಕೆ.ಎಂ. ಹೇಮಯ್ಯಸ್ವಾಮಿ ಉಪಸ್ಥಿತರಿದ್ದರು.ಪುರಸಭೆಯಲ್ಲಿ ಸ್ವಾತಂತ್ರ್ಯೋತ್ಸವ: ಪುರಸಭೆ ಸಭಾಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಲೆಕ್ಕಿಗ ರಮೇಶ ಬೆಳಂಕರ್, ಪ್ರಮುಖರಾದ ಬಿ. ನಾರಾಯಣಪ್ಪ, ವೈ. ಅಬ್ದುಲ್ಮುನಾಫ್ ಇತರರಿದ್ದರು.