ಕುಂದಗೋಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ದೇಶಾದ್ಯಂತ ಪೋಷಣ ಅಭಿಯಾನದ ಕುರಿತು ನಡೆಯುತ್ತಿರುವ ಜಾಗೃತಿ ಅಭಿಯಾನ ಆರೋಗ್ಯಕರ ಮತ್ತು ಸಶಕ್ತ ಭಾರತದತ್ತ ದಾರಿ ತೋರಿಸುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಆರೋಗ್ಯದ ಕಡೆ ಗಮನಹರಿಸಲು ಇದು ಒಳ್ಳೆಯ ವೇದಿಕೆ. ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದ ಶಿವಾನಂದ ಮಠದಲ್ಲಿ ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ, ಧಾರವಾಡ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ತಾಪಂ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪೋಷಣ ಅಭಿಯಾನ, ಸ್ವಚ್ಛತಾ ಹೀ ಸೇವಾ, ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ, ವಿಕಸಿತ ಭಾರತ -2047 ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸಂವಹನ ಇಲಾಖೆಯ ಧಾರವಾಡ ಸಂಯೋಜಕ ಮುರಳೀಧರ ಕಾರಬಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಬಳ್ಳೊಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೊಟ್, ತಾಲೂಕು ಆಸ್ಪತ್ರೆಯ ಆಡಳಿತಧಿಕಾರಿ ಡಾ. ಶಂಕರ ಟಿ, ಆರ್ಥಿಕ ಸಾಕ್ಷರ ಕೇಂದ್ರದ ಆಪ್ತ ಸಮಾಲೋಚಕ ನಿಂಗಪ್ಪ ಮಡಿವಾಳರ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶ್ರಮದಾನ, ಪ್ರಧಾನ ಮಂತ್ರಿಯವರ ಆಶಯದಂತೆ ತಾಯಿಯ ಹೆಸರಲ್ಲಿ ಒಂದು ಸಸಿ ನೆಡುವ ಅಭಿಯಾನ, ಆಯುಷ್ಮಾನ ಕಾರ್ಡುಗಳ ಮಾಹಿತಿ, ಬಿಪಿ ಮತ್ತು ಶುಗರ್ ತಪಾಸಣೆ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಪಪಂ ಅಧ್ಯಕ್ಷ ಸ್ಯಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ ಹಾಗೂ ಸದಸ್ಯರು, ತಹಸೀಲ್ದಾರ್ ರಾಜು ಮಾವರಕರ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಗೊಡ್ಡೆಮ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ, ಪಪಂ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೇಶ ಅಂಗಡಿ ಸೇರಿದಂತೆ ಹಲವರಿದ್ದರು.