ಅಂಬೇಡ್ಕರ್‌ ತತ್ವಾದರ್ಶ ಪರಿಪಾಲಿಸೋಣ: ಜಿಲ್ಲಾಧಿಕಾರಿ ದಿವಾಕರ

KannadaprabhaNewsNetwork |  
Published : Apr 15, 2025, 12:55 AM IST
14ಎಚ್‌ಪಿಟಿ1- ಹೊಸಪೇಟೆಯಲ್ಲಿ ಸೋಮವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ ಅವರ 134ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ ರಾಂ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಚಾಲನೆ ನೀಡಿದರು. | Kannada Prabha

ಸಾರಾಂಶ

ನಾವು ಈಗ ಹಚ್ಚಿರುವ ದೀಪ ಹಣತೆ ಆಗದೇ ಜ್ಞಾನ ದೀಪ ಆಗಲಿ.

ಡಾ. ಬಿ.ಆರ್. ಅಂಬೇಡ್ಕರ್‌, ಡಾ. ಬಾಬು ಜಗಜೀವನ್‌ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅಂಬೇಡ್ಕರ್‌ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ನಾವು ಈಗ ಹಚ್ಚಿರುವ ದೀಪ ಹಣತೆ ಆಗದೇ ಜ್ಞಾನ ದೀಪ ಆಗಲಿ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್‌ ರಾಮ್‌ ಸಂಘದ ವತಿಯಿಂದ ನಗರದ ಜೈಭೀಮ್‌ ವೃತ್ತದಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ 134ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ ರಾಂ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾನ್‌ ಮಾನವತಾವಾದಿ ಆಗಿದ್ದ ಅಂಬೇಡ್ಕರ್‌ ಅವರು ಬರೆದ ಸಂವಿಧಾನ ಮಾನವಧರ್ಮ, ಸಮಾನತೆ, ಕೃಷಿ, ಕೈಗಾರಿಕೆ, ಮಹಿಳೆ ಸೇರಿದಂತೆ ಎಲ್ಲ ವರ್ಗದವರ ಅಭಿವೃದ್ಧಿ ಮಂತ್ರ ಒಳಗೊಂಡಿದೆ. ಮನುಷ್ಯರಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಇರಬೇಕು ಎಂದರು

ನಾವು ಅಂಬೇಡ್ಕರ್‌ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಆದರೆ, ಆಚರಣೆ ಜೊತೆಗೆ ಅನುಕರಣೆ ಮುಖ್ಯವಾಗಿದೆ. ಮಾನವೀಯತೆಗೆ ಸೇವೆ ಮಾಡಲು ಮನಸ್ಸು ಬೇಕು. ಮನುಷ್ಯನ ಸಂಸ್ಕಾರ ಮುಂದಿನ ಮಾನವನ ಸಂಸ್ಕೃತಿಗೆ ಅಸ್ಮಿತೆ ಆಗಿದೆ. ಅಂಬೇಡ್ಕರ್‌ ಅವರು ಗನ್ ಸಂಸ್ಕೃತಿ ಬದಲಿಗೆ ಪೆನ್ ಸಂಸ್ಕೃತಿ ನೀಡಿದ್ದಾರೆ. ಹಾಗಾಗಿ ನಾವೆಲ್ಲರೂ ಅವರ ತತ್ತ್ವಾದರ್ಶ ಪರಿಪಾಲಿಸೋಣ ಎಂದರು.

ಅಂಬೇಡ್ಕರ್ ಭವನ, ಸ್ಮಶಾನದ ಬೇಡಿಕೆಯನ್ನು ಸಮಾಜದವರು ನೀಡಿದ್ದಾರೆ. ಈಗಾಗಲೇ ಭವನಕ್ಕಾಗಿ ಮೂರು ಕಡೆ ಜಾಗ ನೋಡಲಾಗಿದೆ. ಯಾವ ಜಾಗ ಸೂಕ್ತವಾಗಲಿದೆ, ಅದನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ. ಸ್ಮಶಾನಕ್ಕೂ ಜಾಗ ಮೀಸಲಿರಿಸಲಾಗುವುದು. ಉಳಿದ ಬೇಡಿಕೆಗಳ ಈಡೇರಿಕೆಗೂ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದರು.

ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್‌ ರಾಮ್‌ ಅವರು ದೇಶದಲ್ಲಿ ಹಸಿವು, ಬಡತನ ಇದ್ದಾಗ ಪಂಜಾಬ್, ಹರ್ಯಾಣ ಭಾಗದಲ್ಲಿ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡಿದರು. ಅವರ ಶ್ರಮದ ಫಲವಾಗಿ ದೇಶ ಆಹಾರ ಉತ್ಪಾದನೆಯಲ್ಲಿ ಸಬಲತೆ ಸಾಧಿಸಿತು ಎಂದರು.

ಚಳ್ಳಕೆರೆಯ ಉಪನ್ಯಾಸಕ ಡಾ. ರಾಜಕುಮಾರ ಕೆಆರ್‌ಜೆ, ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕ ಡಾ. ತಿಪ್ಪೇಸ್ವಾಮಿ ಎಚ್‌., ಡಾ. ಬಾಬು ಜಗಜೀವನ್‌ ರಾಂ ಕುರಿತು ಉಪನ್ಯಾಸ ನೀಡಿದರು.

ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಶೃತಿ, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ, ಗೌರವಾಧ್ಯಕ್ಷ ಎಂ.ಸಿ. ವೀರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್‌.ವಿ. ಮಂಜುನಾಥ ಮತ್ತಿತರರಿದ್ದರು. ನಗರದ ಬಳ್ಳಾರಿ ರಸ್ತೆಯ ಅಂಬೇಡ್ಕರ್‌ ವೃತ್ತದಲ್ಲಿ ಶಾಸಕ ಎಚ್‌.ಆರ್‌. ಗವಿಯಪ್ಪನವರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಹಂಪಿಯಿಂದ ಜ್ಯೋತಿ ತರಲಾಯಿತು. ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಶಿಕ್ಷಕ ಬಸವರಾಜ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ