ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ
ಮಡಿವಾಳ ಮಾಚಿದೇವನವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡೋಣ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ ಕೃಷ್ಣೇಗೌಡ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಜಾತಿ ವ್ಯವಸ್ಧೆ ಮುಖ್ಯವಲ್ಲ, ನಾವು ಶಿಕ್ಷಣ ಪಡೆದುಕೊಳ್ಳುವ ಮೂಲಕ ಸುಧಾರಣೆಯಾಗಿದ್ದು ಮನುಷ್ಯ ಮನುಷ್ಯರನ್ನು ಪ್ರೀತಿ ಮಾಡುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸೋಣ’ ಎಂದು ತಿಳಿಸಿದರು.ಕರ್ನಾಟಕ ಮಡಿವಾಳ ಸಂಘಟನೆಗಳ ಒಕ್ಕೂಟ ರಾಜ್ಯ ಉಪಾಧ್ಯಕ್ಷೆ ಎಚ್.ಎಸ್.ಭಾನುಮತಿ ಮಾತನಾಡಿ, ‘ಬಿಚ್ಚುಗತ್ತಿಯ ಮಡಿವಾಳ ಮಾಚಿದೇವ ನಮ್ಮ ಕುಲ ಗುರು. ಅವರ ವಚನಗಳು ಲಭ್ಯವಿದೆ. ಉಡಿಯಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣರೆಂಬ ಮತಿಭ್ರಷ್ಟರೇ ನೆಂಂಬೆನಯ್ಯ..ಎಂದು ಹೇಳಿದ್ದಾರೆ. ಅವರ ಜೀವನ ಆದರ್ಶವಾಗಬೇಕು. ಅವರ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೃತ್ತಿಯನ್ನು ಅಗೌರವದಿಂದ ನೋಡಲಿಲ್ಲ, ಯಾವುದೇ ಕಾಯಕ ಹೀನಾವೃತ್ತಿಯಲ್ಲ, ಶಿವಶರಣರು ಬದ್ದತೆ ಉಳಿಸಿಕೊಂಡಿದ್ದರು. ವಸ್ತ್ರ ಮಾತ್ರ ಶುಭ್ರವಾಗಿರಬೇಕು ಎನ್ನುವುದಲ್ಲ, ವ್ಯಕ್ತಿಯ ಮನಸ್ಸು ಶುದ್ಧವಾಗಿರಬೇಕು ಎಂದು ತಿಳಿಯಬೇಕು. ವೃತ್ತಿಯನ್ನು ಬಹಳ ಶ್ರದ್ಧೆಯಿಂದ ಮಾಡಬೇಕು. ಮಡಿವಾಳ ಮಾಚಿದೇವರು ವಚನಗಳನ್ನು ಬಹಳ ಶ್ರೇಷ್ಠತೆಯಿಂದ ಕಾಪಿಟ್ಟು ಉಳಿಸಿ ಕೊಟ್ಟಿರುತ್ತಾರೆ. ಅದನ್ನು ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾ ಮಡಿವಾಳರ ಮಹಿಳಾ ಸಂಘ ಅಧ್ಯಕ್ಷ ಎನ್.ಆರ್. ವಿಜಯಲಕ್ಷ್ಮಿ ಅಂಜನಪ್ಪ ಮಾತನಾಡಿದರು. ಜಿಲ್ಲಾ ಮಡಿವಾಳ ನೌಕರರ ಸಂಘ ಅಧ್ಯಕ್ಷ ಎಚ್.ಸಿ. ಶಿವಪ್ಪ, ತಾಲೂಕು ಮಡಿವಾಳ ಸಂಘ ಅಧ್ಯಕ್ಷ ಎಸ್ ಗೋವಿಂದಪ್ಪ, ಸ್ವತಂತ್ರ ಹೋರಾಟಗಾರ ಎಚ್.ಎಂ. ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಪಿ.ತಾರಾನಾಥ್ ಇದ್ದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ ಕೃಷ್ಣೇಗೌಡ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.