ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಜ್ವಲ್ ಸೆಲ್ನಲ್ಲಿ ಪತ್ತೆಯಾದ ಮೊಬೈಲ್ನಲ್ಲಿ ಏರ್ಟೆಲ್ ಸಿಮ್ ಕಾರ್ಡ್ ಬಳಸಿರುವುದು ಗೊತ್ತಾಗಿದೆ. ಆದರೆ ಆ ಸಿಮ್ ಯಾರ ಹೆಸರಿನಲ್ಲಿತ್ತು. ಯಾವಾಗಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಟವರ್ನಲ್ಲಿ ಆ ಸಿಮ್ ಸಂಪರ್ಕ ಹೊಂದಿತ್ತು ಎಂಬುದು ಸೇರಿ ಇತರೆ ಮಾಹಿತಿ ಕೋರಿ ಏರ್ಟೆಲ್ ಕಂಪನಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸೋಮವಾರದೊಳಗೆ ಅಧಿಕೃತ ವಿವರ ಸಿಗಬಹುದು ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಜೈಲಿನಲ್ಲಿ ಏರ್ಟೆಲ್ ಕಂಪನಿ ಸಿಮ್ಗಳು ಸಕ್ರಿಯವಾಗಿರುವ ಬಗ್ಗೆ ಆ ಕಂಪನಿ ವಿರುದ್ಧ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆ ವೇಳೆ ಏರ್ಟೆಲ್ ಕಂಪನಿಯನ್ನು ಭಾಧ್ಯಸ್ಥರನ್ನಾಗಿಸುವಂತೆ ಸಿಸಿಬಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕಾರಾಗೃಹ ಇಲಾಖೆ ಡಿಜಿಪಿ ಹೇಳಿದ್ದರು.ಎಫ್ಎಸ್ಎಲ್ ವರದಿ ನಿರೀಕ್ಷೆ-ಡಿಸಿಪಿ
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೈಲಿನಲ್ಲಿ ಸಿಕ್ಕ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿ ಪರಿಶೀಲನೆಗೆ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಮೊಬೈಲ್ನಲ್ಲಿದ್ದ ಆ್ಯಪ್ಗಳ ಪಾಸ್ವರ್ಡ್ ಅನ್ನು ಆರೋಪಿಗಳು ಹೇಳಿಲ್ಲ. ಹೀಗಾಗಿ ಆ ಮೊಬೈಲ್ ಯಾರು ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಪೆನ್ ಡ್ರೈವ್ನಲ್ಲಿ ವಿಡಿಯೋಗಳಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಆ ಪೆನ್ ಡ್ರೈವ್ ಹಾಗೂ ಮೊಬೈಲ್ ಬಗ್ಗೆ ಎಫ್ಎಸ್ಎಲ್ ತಜ್ಞರ ವರದಿ ಬಳಿಕ ಗೊತ್ತಾಗಲಿದೆ ಎಂದರು.
ಜೈಲಿನಲ್ಲಿ ರೆಡ್ ಮಿ ಮೊಬೈಲ್ನಲ್ಲಿ ಸಿಗ್ನಲ್ ಸಿಗುತ್ತೆ ಎಂದು ಕೈದಿಗಳು ಭಾವಿಸಿದ್ದಾರೆ. ಹೀಗಾಗಿಯೇ ಜೈಲಿನಲ್ಲಿ ಹೆಚ್ಚು ರೆಡ್ಮಿ ಮೊಬೈಲ್ಗಳು ಬಳಕೆಯಾಗುತ್ತಿವೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಆ ಮೊಬೈಲ್ ಕಂಪನಿಗೂ ಪತ್ರ ಬರೆಯುತ್ತೇವೆ ಎಂದು ಡಿಸಿಪಿ ಮಾಹಿತಿ ನೀಡಿದರು. ಪ್ರಜ್ವಲ್ ಮೊಬೈಲ್ ಹಿಂದೆ ಕಾರಾಗೃಹ ಸಿಬ್ಬಂದಿ?
ಹಲವು ದಿನಗಳಿಂದ ಪ್ರಜ್ವಲ್ ಮೊಬೈಲ್ ಬಳಸಿದ್ದಾರೆ. ಆದರೆ ತಮ್ಮ ಸೆಲ್ನಲ್ಲಿ ಮೊಬೈಲ್ ಇಟ್ಟುಕೊಂಡರೆ ಪೊಲೀಸರು ಅಥವಾ ಕಾರಾಗೃಹ ಅಧಿಕಾರಿಗಳ ಅನಿರೀಕ್ಷಿತ ದಾಳಿಗಳು ನಡೆದಾಗ ಸಿಕ್ಕಿಬೀಳುವ ಆತಂಕ ಇತ್ತು. ಹೀಗಾಗಿ ಹಣದ ಆಮಿಷವೊಡ್ಡಿ ಕಾರಾಗೃಹ ಸಿಬ್ಬಂದಿ ನೆರವು ಪಡೆದು ಪ್ರಜ್ವಲ್ ಮೊಬೈಲ್ ಬಳಸಿರಬಹುದು ಎಂದು ಅನುಮಾನವಿದೆ.
ಜೈಲಿನಲ್ಲಿ ಅಶ್ಲೀಲ ಚಿತ್ರ ಹಾಗೂ ವಿಡಿಯೋ ವೀಕ್ಷಣೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣದ ಕೈದಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸುವಂತೆ ಸಾಮಾಜಿಕ ವಲಯದಲ್ಲಿ ಆಗ್ರಹ ಕೇಳಿ ಬಂದಿದೆ.