ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಎಂ.ಎಂ.ಬಂಗ್ಲೆ ಎದುರು ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಿಹಿಹಂಚಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಘ ಪರಿವಾರದ ಧುರೀಣ ಶಿವಾನಂದ ಗಾಯಕವಾಡ ಚುನಾವಣೆಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಪಪ್ಪೂ ಮತ್ತವರ ತಂಡ ನಿರಂತರ ಮತಕಳವು ಆರೋಪಿಸುತ್ತ ದೇಶದ ಮುಂದೆ ನಗೆಪಾಟಲಿಗೀಡಾಗುತ್ತಿದ್ದಾರೆ. ಸಾಲದ್ದಕ್ಕೆ ಮನೆಗೊಬ್ಬರಿಗೆ ಸರ್ಕಾರಿ ನೌಕರಿ ನೀಡುವ ಅಸಾಧ್ಯವಾದ ಭರವಸೆ ನೀಡಿದ್ದ ಮತ್ತೊಬ್ಬ ಪಪ್ಪು ಯಾದವ್ನನ್ನೂ ಬಿಹಾರಿಗಳು ತಿಪ್ಪೆಗೆಸೆದಿದ್ದಾರೆ. ನೂರು ಬಾರಿ ಒಂದೇ ಸುಳ್ಳನ್ನು ಹೇಳಿದರೆ ಸತ್ಯವಾಗದು ಎಂಬುದನ್ನು ಮತ ಚಲಾಯಿಸುವ ಮೂಲಕ ಬಿಹಾರ ಮತದಾರ ಸೂಚ್ಯವಾಗಿ ಎಡಬಿಡಂಗಿಗಳಿಗೆ ತಿಳಿಸಿದ್ದಾನೆ. ದೇಶದ ಭದ್ರತೆಯತ್ತ ಚಿತ್ತ ಹರಿಸದೇ ಚುನಾವಣೆ ಸಂದರ್ಭದಲ್ಲೇ ಬಾಂಬ್ ಬ್ಲಾಸ್ಟ್ ಏಕಾಗುತ್ತವೆ ಎಂದು ಪ್ರಶ್ನಿಸುವ ಎಡಪಂಥೀಯ ರಾಜಕಾರಣಿಗಳು ತಮ್ಮ ಬ್ರದರ್ಸ್ ಗಳನ್ನು ರಕ್ಷಿಸಿಕೊಳ್ಳಲು ವಿತಂಡವಾದ ಮಂಡಿಸಿದರೂ ಕೇಂದ್ರ ಸರ್ಕಾರ ದೆಹಲಿ ಸ್ಫೋಟದ ಮೂಲವನ್ನು ಹೆಕ್ಕಿ ತೆಗೆದು ಅಪರಾಧಿಗಳನ್ನು ಮತ್ತವರಿಗೆ ನೆರವಾದರನ್ನು ಶಿಕ್ಷಿಸಲು ಹೊರಟಿದೆ. ದೇಶ ಮುಖ್ಯ ಎಂಬ ಭಾವನೆಯಿರುವ ಯಾವುದೇ ದೇಶವಾಸಿ ಇಂಥ ಉಗ್ರ ಕೃತ್ಯಕ್ಕೆ ಪುಷ್ಟಿ ನೀಡಲಾರ. ದೇಶದ ಭದ್ರತೆ ಮತ್ತು ಹಿಂದುತ್ವದ ರಕ್ಷಣೆಗೆ ಜಾತಿ-ಪಂಥ, ಪಕ್ಷ ಕಾರಣಗಳನ್ನು ಬಿಟ್ಟು ನಾವೆಲ್ಲ ಒಂದು ಎಂಬ ಏಕಸೂತ್ರದಡಿ ದೇಶವಾಸಿಗಳು ಸೇರುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಬೇಕೆಂದರು.
ವಿಜಯೋತ್ಸವದಲ್ಲಿ ಮೀನಾಕ್ಷಿ ಸವದಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಶೇಖರ ಅಂಗಡಿ, ಸಿದ್ಧನಗೌಡ ಪಾಟೀಲ, ಯಲ್ಲಪ್ಪ ಕಟಗಿ, ವಿದ್ಯಾ ದಬಾಡಿ, ಗೌರಿ ಮಿಳ್ಳಿ, ಶ್ರೀಶೈಲ ಯಾದವಾಡ, ಪರಶುರಾಮ ಕಾಖಂಡಕಿ, ವಿಜಯ ಕಲಾಲ, ಅಶೋಕ ರಾವಳ, ಮಹಾದೇವ ತಳವಾರ, ಮಾರುತಿ ಗಾಡಿವಡ್ಡರ ಸೇರಿದಂತೆ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.