ಗಡಿಪಾರು ಆದೇಶದಿಂದ ಬದುಕು ಬದಲಾಯ್ತು..!

KannadaprabhaNewsNetwork | Updated : May 29 2025, 12:00 AM IST
ರಾಹುಲ್‌ ಪ್ರಭು ರೌಡಿಶೀಟರ್‌. ಈತನ ಮೇಲೆ ಸಾಕಷ್ಟು ಕೇಸ್‌ಗಳಿದ್ದವು. ಹೀಗಾಗಿ ಪೊಲೀಸ್‌ ಕಮಿಷನರೇಟ್‌ ಈತನನ್ನು ಜನವರಿಯಲ್ಲಿ ಗಡೀಪಾರು ಮಾಡಿ ಆದೇಶಿಸಿತ್ತು. ಆಗ ಈತನಿಗೆ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದ್ದನಂತೆ.
Follow Us

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಕಮಿಷನರೇಟ್‌ ಮಾಡಿದ ಗಡಿಪಾರು ಆದೇಶದಿಂದ ನನ್ನ ಜೀವನವೇ ಬದಲಿಸಿದೆ. ಹುಬ್ಬಳ್ಳಿಗೆ ಬರುವ ಇರಾದೆ ಇಲ್ಲ. ಮೈಸೂರಲ್ಲೇ ನೆಲೆ ಕಂಡುಕೊಂಡಿದ್ದೇನೆ ಎಂದು ಗಡಿಪಾರಾದ ರೌಡಿಶೀಟರ್‌ ರಾಹುಲ್‌ ಪ್ರಭು ಹೇಳಿಕೊಂಡಿದ್ದಾನೆ.

ರಾಹುಲ್‌ ಪ್ರಭು ರೌಡಿಶೀಟರ್‌. ಈತನ ಮೇಲೆ ಸಾಕಷ್ಟು ಕೇಸ್‌ಗಳಿದ್ದವು. ಹೀಗಾಗಿ ಪೊಲೀಸ್‌ ಕಮಿಷನರೇಟ್‌ ಈತನನ್ನು ಜನವರಿಯಲ್ಲಿ ಗಡೀಪಾರು ಮಾಡಿ ಆದೇಶಿಸಿತ್ತು. ಆಗ ಈತನಿಗೆ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದ್ದನಂತೆ. ಆ ಬಗ್ಗೆ ಒಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲೂ ಬಿಟ್ಟಿದ್ದನಂತೆ. ಬಳಿಕ ವಿದ್ಯಾನಗರ ಠಾಣೆಯ ಪಿಎಸ್‌ಐ ಒಬ್ಬರು ಆತನಿಗೆ ಬುದ್ದಿ ಹೇಳಿ ಗಡಿಪಾರು ಆದೇಶದಂತೆ ಮೈಸೂರಲ್ಲಿ ಉಳಿದು ಬಾ ಎಂದು ಹೇಳಿ ಕಳುಹಿಸಿದ್ದರಂತೆ.

ಅದರಂತೆ ಮೈಸೂರಿಗೆ ಬಂದ ಮೇಲೆ ಅಲ್ಲಿನ ಕೆಲವರ ಸಹಾಯದಿಂದ, ಪೊಲೀಸರ ಪ್ರೋತ್ಸಾಹದಿಂದ ಸಣ್ಣದಾದ ಹೋಟೆಲ್‌ ಇಟ್ಟುಕೊಂಡಿದ್ದಾನೆ. ಆ ಹೋಟೆಲ್‌ನಿಂದ ಈತನ ಬದುಕೇ ಬದಲಾಗಿದೆ. ರೌಡಿಸಂ ಎಲ್ಲವನ್ನು ಬಿಟ್ಟು ಹೋಟೆಲ್‌ ನೋಡಿಕೊಂಡು ಹೋಗುತ್ತಿದ್ದಾನೆ. ಇನ್ನೆರಡು ತಿಂಗಳಿಗೆ ಗಡಿಪಾರು ಆದೇಶ ಮುಕ್ತಾಯಗೊಳ್ಳಲಿದೆಯಂತೆ. ಆದರೆ, ಈತನಿಗೆ ಮರಳಿ ಹುಬ್ಬಳ್ಳಿಗೆ ಬರಲು ಇಚ್ಛೆ ಇಲ್ಲ. ತಾನು ಮೈಸೂರಲ್ಲೇ ಸೆಟ್ಲ್‌ ಆಗುತ್ತೇನೆ. ನನಗೆ ಗಡಿಪಾರು ಮಾಡದೇ ಇದ್ದರೆ ಏನಾದರೂ ಮಾಡಿ ಮತ್ತೆರಡು ಕೇಸ್‌ಗಳಲ್ಲಿ ಸಿಲುಕಿಕೊಳ್ಳುತ್ತಿದ್ದೆ. ಆದರೆ, ಚಾಮುಂಡೇಶ್ವರಿ ದೇವಿ ಆಶೀರ್ವಾದದಿಂದ ನನ್ನ ಬದುಕು ಬದಲಾಗಿದೆ. ಇಲ್ಲೇ ನೆಲೆ ಕಂಡಿದ್ದೇನೆ. ಇಲ್ಲೇ ಇರುತ್ತೇನೆ. ನನ್ನನ್ನು ಗಡಿಪಾರು ಮಾಡಿದ್ದಕ್ಕೆ ಕಮಿಷನರ್‌ ಎನ್‌. ಶಶಿಕುಮಾರ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿರುವ ವಿಡಿಯೋವನ್ನು ಪೊಲೀಸ್‌ ಕಮಿಷನರೇಟ್‌ ಬಿಡುಗಡೆ ಮಾಡಿದೆ.

ಗಡಿಪಾರು ಆದೇಶ ರೌಡಿಶೀಟರ್‌ಗಳ ಬದುಕು ಬದಲಿಸಲು ಎಂಬುದಕ್ಕೆ ಇದು ಸಾಕ್ಷಿಯಾದಂತಾಗಿದೆ.