ಮುಂಡರಗಿ: ಸಕ್ಕರೆಯ ರುಚಿ ಹೇಗಿದೆ ಎಂದು ಪುಸ್ತಕ ಓದಿದರೆ ತಿಳಿಯುವುದಿಲ್ಲ. ಸಕ್ಕರೆಯನ್ನು ತಿಂದು ನೋಡುವುದೇ ಅನುಭಾವ. ಗುರು ಹೇಳಿಕೊಟ್ಟಿದ್ದನ್ನು ಕೇಳಿಸಿಕೊಳ್ಳುವುದು ಅನುಭಾವವಲ್ಲ, ಸಾಧನೆ ಮಾಡಿ ಅದನ್ನು ಕಂಡುಕೊಳ್ಳುವುದು ಅನುಭಾವ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.
ಮನುಷ್ಯನಿಗೆ ದೇವರ ಅನುಭವಕ್ಕಿಂತ ಬದುಕಿನ ಅನುಭವ ಇದ್ದರೆ ಸಾಕು. ಹೀಗಾಗಿ ಶರಣರು ಮನುಷ್ಯನಿಗೆ ಬಹಳ ಸ್ವಚ್ಛವಾಗಿ ಅನುಭವವನ್ನು ಹೇಳಿದ್ದಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದನ್ನು ಕೊನೆಯವರೆಗೂ ತಿಳಿದುಕೊಳ್ಳದಿದ್ದರೆ ಅವನು ಮನುಷ್ಯನೇ ಅಲ್ಲ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರಭು ಸೊಪ್ಪಿನ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಚರ್ಚೆ, ವಚನಗಳ ಮೂಲಕ ಜಾಗೃತಿ, ಕಾಯಕ- ದಾಸೋಹದ ಮೂಲಕ ಸಮಾಜ ಕಟ್ಟಿದರು. ಅದಕ್ಕಾಗಿ ಜನಪದರು ಅನುಭಾವದ ನಿಧಿ ಬಸವಣ್ಣ ಎಂದು ಕರೆದರು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಯಾವುದೇ ಕಾಯಕವ ಮಾಡಿದರೂ ಭಕ್ತಿ ಶ್ರದ್ಧೆಯಿಂದ ಮಾಡಬೇಕು ಎಂದರು.ಶಿವಾನುಭ ಕಾರ್ಯಕ್ರಮದ ಭಕ್ತಿ ಸೇವೆ ವಹಿಸಿಕೊಂಡಿದ್ದ ಶಿಕ್ಷಕ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ನಾಡಿಗೆ ತೋಂಟದಾರ್ಯ ಮಠದ ಕೊಡುಗೆ ಅಪಾರವಾಗಿದೆ. ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಕಾರ್ಯಗಳನ್ನು ಇಂದಿನ ಮುಂಡರಗಿ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಚಾಚೂ ತಪ್ಪದೇ ಮಾಡಿಕೊಂಡು ಹೋಗುತ್ತಿದ್ದಾರೆ ಎಂದರು.
ಸನ್ಮಾನಿತರ ಪರವಾಗಿ ಜಾಫರ್ ಬಚ್ಚೇರಿ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಖಾಳಜಿ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಅವರು ಅದನ್ನು ಯಾವುದಕ್ಕಾಗಿ ಬಳಕೆ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು. ಯಾವುದೇ ಕರೆಗಳು ಬಂದು ನಿಮಗೆ ಒಟಿಪಿ ಮತ್ತು ಯಾವುದಾದರೂ ನಿಮ್ಮ ಬ್ಯಾಂಕ್ ಖಾತೆಯ ಕುರಿತು ಮಾಹಿತಿ ಕೇಳಿದರೆ ಹೇಳಬಾರದು ಎಂದರು.