ಆನಂದಪುರ: ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕಿಗೆ ಅರ್ಥ ಬರಲು ಸಾಧ್ಯ ಎಂದು ಕೋಣಂದೂರು ಮಳಲಿ ಮಠದ ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿ ತಿಳಿಸಿದರು. ಅವರು ಇತಿಹಾಸ ಪ್ರಸಿದ್ಧವಾದ ಕೆಂಜಿಗಾಪುರ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರ ವೀರಭದ್ರೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ ನೆರವೇರಿಸಿ ಧರ್ಮಸಭೆಯ ಸಾನಿಧ್ಯವಹಿಸಿ ಮಾತನಾಡಿ, ಶ್ರಾವಣ ಮಾಸ ಹಿಂದುಗಳಿಗೆ ಪವಿತ್ರವಾದ ಮಾಸ ಈ ಮಾಸದಲ್ಲಿ ದೇವರ ನಾಮಸ್ಮರಣೆಯನ್ನು ಮಾಡಬೇಕು. ದಾನ, ಧರ್ಮ, ಪುಣ್ಯ,ಸತ್ಯ ಇವುಗಳು ಸಾರ್ಥಕ ಬದುಕಿಗೆ ಅಗತ್ಯ. ಅಲ್ಲದೆ ಮಕ್ಕಳಿಗೆ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯ ಹಾಗೂ ಬಾಂಧವ್ಯ ಗಳಿಸುವ ವಚನಕಾರರ ಸಂದೇಶ ಸಾರಬೇಕಾಗಿದೆ. ದ್ವೇಷ ಅಸೂಯೊ ಮೆಟ್ಟಿನಿಂತು ಎಲ್ಲರೂ ಉತ್ತಮ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು ಆಗ ಯಾವ ದುಷ್ಟ ಶಕ್ತಿಯು ಏನು ಮಾಡಲು ಸಾಧ್ಯವಿಲ್ಲ. ಹುಟ್ಟುವಾಗ ಜಗತ್ತಿಗೆ ಮನುಷ್ಯ ಏನು ತೆಗೆದುಕೊಂಡು ಬರುವುದಿಲ್ಲ. ಪರಲೋಕಕ್ಕೆ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಜೀವನವೆಂಬ ಮೂರು ದಿನದ ಈ ಬದುಕಿನಲ್ಲಿ ಒಳಿತು ಒಂದೇ ಸಾಧನೆ ಎನಿಸಿಕೊಳ್ಳುತ್ತದೆ ಎಂದರು. ದೇವಸ್ಥಾನ ಸಮಿತಿಯ ಸದಸ್ಯರಾದ ಶಾಂತಕುಮಾರ್ ಗೌಡ, ಸೋಮಶೇಖರ್ ಗೌಡ, ಅರ್ಚಕ ಗಂಗಾಧರಪ್ಪ ಇದ್ದರು.
ಆನಂದಪುರ ಸಮೀಪದ ಕೆಂಜಿಗಾಪುರ ವೀರಭದ್ರ ಸ್ವಾಮಿ ದೇವಾಲಯದಲ್ಲಿ ನಡೆದ ಶ್ರಾವಣ ಮಾಸದ ಧರ್ಮಸಭೆಯಲ್ಲಿ ಕೋಣಂದೂರು ಮಳಲಿ ಮಠದ ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿ ಸಾನಿಧ್ಯ ವಹಿಸಿದ್ದರು.