ಅಂಬೇಡ್ಕರ್ ಮತ್ತು ಬಾಬು ಜಗಜೀವನರಾವ್ ಅವರ ಜಯಂತಿ ಪ್ರಯುಕ್ತ ಸಾಮೂಹಿಕ ವಿವಾಹ, ದುರ್ಗಾದೇವಿ ಜಾತ್ರೆ ಧಾರ್ಮಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಕನೂರುನವ ದಂಪತಿಗಳು ಸಾಮರಸ್ಯದಿಂದ ಸಾಗಿದರೆ ಬದುಕು ಹಸನನಾಗುತ್ತದೆ ಎಂದು ಮುಖಂಡ ಈಶಪ್ಪ ದೊಡ್ಮನಿ ಹೇಳಿದರು.
ತಾಲೂಕಿನ ಶಿರೂರು ಗ್ರಾಮದಲ್ಲಿ ದುರ್ಗಾದೇವಿ ಹಾಗೂ ಮಲೀಯಮ್ಮದೇವಿ ಶಿಲಾ ದೇವಸ್ಥಾನದ ಭೂಮಿ ಪೂಜೆ ಮತ್ತು ಜಾತ್ರಾ ಮಹೋತ್ಸವ, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾವ್ ಅವರ ಜಯಂತಿ ಪ್ರಯುಕ್ತ ಜರುಗಿದ 11 ಜೋಡಿ ಸಾಮೂಹಿಕ ವಿವಾಹ, ದುರ್ಗಾದೇವಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಶಿರೂರು ಗ್ರಾಮಸ್ಥರು ನೀಡಿದ ಸಹಕಾರದಿಂದ ಸಾಮೂಹಿಕ ವಿವಾಹ, ದೇವಸ್ಥಾನದ ನೂತನ ಶಿಲಾ ಕಟ್ಟಡಕ್ಕೆ ಭೂಮಿ ಪೂಜೆ ಜರುಗಿದೆ. ಜಾತ್ರೆಗಳು ಮನಸ್ಸನ್ನು ಒಂದು ಮಾಡುತ್ತವೆ ಎಂದರು.ಇಟಗಿಯ ಶಿವಶರಣ ಗದಿಗೆಪ್ಪಜ್ಜನವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್, ಜಗಜೀವನರಾಮ್ ನೊಂದವರ ಬಾಳಿಗೆ ಬೆಳಕು ನೀಡಿದರು. ಹಾಗಾಗಿ ಎಲ್ಲರೂ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದರು.
ಗ್ರಾಮದಲ್ಲಿ ಬೆಳಗ್ಗೆ ಶೇಖರಗೌಡ ಮಾಪಾ ಮನೆಯಿಂದ ದೇವಿಗೆ ಮಾಲೆ ತಂದರು. ರಾಜೇಂದ್ರಗೌಡ ಪೊಪಾ ಮನೆಯವರಿಂದ ಸಹ ಮಾಲೆ ತರಲಾಯಿತು. ನಂತರ ಗಂಗೆಸ್ನಾನ, ಅಗ್ನಿ ಪ್ರವೇಶ ಜರುಗಿದವು. ನಂತರ ಡಾ. ಬಿ.ಆರ್. ಅಂಭೇಡ್ಕರ್, ಜಗಜೀವನರಾಮ್ ಮೂರ್ತಿ ಭಾವಚಿತ್ರ ಮೆರವಣಿಗೆ ಜರುಗಿತು. ಸವಡಿಯ ಮರುಳಸಿದ್ದೇಶ್ವರ ಸ್ವಾಮೀಜಿ, ಹಜರತ್ ದರ್ಗಾದ ಸಯ್ಯದ್ ನಿಜಾಮುದ್ದೀನ್ ಶಾ, ಅಳವಂಡಿಯ ಮರುಳಸಿದ್ದೇಶ್ವರ ಶ್ರೀ, ಪಂಚಾಕ್ಷರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.ಪ್ರಮುಖರಾದ ಚನ್ನಬಸಪ್ಪ ಹೊಳೆಯಪ್ಪನವರು, ಯಲ್ಲಪ್ಪ ಹಳೆಮನಿ, ನಿಂಗಜ್ಜ ಶಹಾಪೂರ, ರಮೇಶ ಓಜನಹಳ್ಳಿ, ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಚಿನ್ನಪ್ಪ ವಾಲ್ಮೀಕಿ, ಗ್ರಾಪಂ ಅಧ್ಯಕ್ಷ ವಿರುಪಾಕ್ಷಪ್ಪ ತಳಕಲ್, ಉಪಾಧ್ಯಕ್ಷೆ ದೇವಮ್ಮ ವಾಲ್ಮೀಕಿ, ಸದಸ್ಯರಾದ ಮಲ್ಲಪ್ಪ ಬಂಗಾರಿ, ವೀರೇಂದ್ರ ಪಿ. ಮಾದಿನೂರು, ಶಿವವ್ವ ಹರಿಜನ, ನಾಗರಾಜ ಹುಣಸಿಮರದ, ರವಿ ಮಾಟಲದಿನ್ನಿ ಇತರರಿದ್ದರು.