ಭಗವಂತನ ಆರಾಧನೆ ಮಾಡಿದರೆ ಜೀವನ ಸಾರ್ಥಕ: ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಶ್ರೀ

KannadaprabhaNewsNetwork |  
Published : Nov 03, 2025, 02:45 AM IST
ನ.1ವೈ.ಎಲ್.ಪಿ07 ಅಣಲಗಾರ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಜ್ಞಾನಯಜ್ಞ ಸಪ್ತಾಹದ ಸಮಾರೋಪ ನಡೆಯಿತು. | Kannada Prabha

ಸಾರಾಂಶ

ಧರ್ಮ ಮತ್ತು ಭಗವಂತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧರ್ಮಾಚರಣೆಯ ಮೂಲಕ ನಿರಂತರವಾಗಿ ಭಗವಂತನ ಆರಾಧನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ.

ಅಣಲಗಾರ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಜ್ಞಾನಯಜ್ಞ ಸಪ್ತಾಹದ ಸಮಾರೋಪ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಧರ್ಮ ಮತ್ತು ಭಗವಂತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧರ್ಮಾಚರಣೆಯ ಮೂಲಕ ನಿರಂತರವಾಗಿ ಭಗವಂತನ ಆರಾಧನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸ್ವರ್ಣವಲ್ಲೀ ಮಠ, ಕರಡೊಳ್ಳಿಯ ಗೋವರ್ಧನ ಗೋಶಾಲೆಗಳ ಸಹಯೋಗದಲ್ಲಿ ನಡೆದ ಶ್ರೀಮದ್ ಭಾಗವತ ಜ್ಞಾನಯಜ್ಞ ಸಪ್ತಾಹದ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಹಾಭಾರತ ಧರ್ಮವನ್ನು ಸಾರುತ್ತದೆ. ಭಾಗವತ ಭಗವತ್ ತತ್ವವನ್ನು ಬೋಧಿಸುತ್ತದೆ. ಭಾಗವತದಲ್ಲಿ ಶ್ರೀಕೃಷ್ಣ ಅನೇಕ ಬಾರಿ ವಿಶ್ವರೂಪದರ್ಶನ ಮಾಡಿದ ಉಲ್ಲೇಖದೊಂದಿಗೆ ವರ್ಣನೆ ಇದೆ. ಭಾಗವತವನ್ನು ನಿತ್ಯವೂ ಓದುವ, ಮನನ ಮಾಡುವುದನ್ನು ರೂಢಿಸಿಕೊಂಡರೆ ವಿಶೇಷ ಪುಣ್ಯ ಲಭಿಸುತ್ತದೆ.

ಕಳೆದ 8 ತಿಂಗಳ ಅವಧಿಯಲ್ಲಿ ಯಲ್ಲಾಪುರ ತಾಲೂಕಿನಲ್ಲೇ ಶ್ರೀಮದ್ಭಾಗವತ ಅನೇಕ ಸಪ್ತಾಹಗಳು ನಡೆದಿವೆ. ಯಲ್ಲಾಪುರ ಸೀಮೆಯ ಭಕ್ತರ ಅಪಾರ ಭಕ್ತಿ, ಶ್ರದ್ಧೆಯೇ ಇದಕ್ಕೆ ಕಾರಣ. ಗೀತಾಚಾರ್ಯನಾದ ಶ್ರೀಕೃಷ್ಣ ನೆಲೆಸಿದ ಪವಿತ್ರವಾದ ಅಣಲಗಾರ ಕ್ಷೇತ್ರದಲ್ಲಿ ಕೃಷ್ಣನ ಲೀಲೆಯನ್ನು ಸಾರುವ ಭಾಗವತದ ೧೦ನೇ ಸ್ಕಂದದ ಪಾರಾಯಣ, ಪ್ರವಚನ ನಡೆದಿದೆ. ಇಂತಹ ಧಾರ್ಮಿಕ ಕಾರ್ಯಗಳು ಇನ್ನಷ್ಟು ನಡೆಯುವಂತಾಗಬೇಕು ಎಂದರು.

ಸ್ವರ್ಣವಲ್ಲೀ ಮಠದ ಕಿರಿಯ ಯತಿಗಳಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ವಾಂಸರಾದ ವಾಸುದೇವ ಭಟ್ಟ ಹಂದಲಸು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೆಪಾಲ ವೇದಿಕೆಯಲ್ಲಿದ್ದರು.

ಮೊಕ್ತೇಸರ ಗೋಪಾಲಕೃಷ್ಣ ಭಟ್ಟ ವೈದಿಕರಮನೆ ಮತ್ತು ಲಕ್ಷ್ಮೀ ಭಟ್ಟ ದಂಪತಿ ಹಾಗೂ ಶ್ರೀಧರ ಅಣಲಗಾರ ಶ್ರೀಗಳ ಪಾದಪೂಜೆ ನೆರವೇರಿಸಿದರು. ಮಹಾಬಲೇಶ್ವರ ಭಟ್ಟ ಶೀಗೆಪಾಲ ನಿರ್ವಹಿಸಿದರು.

ವೈದಿಕ ಸಭೆಯಲ್ಲಿ ೭ ದಿನಗಳ ಕಾಲ ಭಾಗವತದ ಪ್ರವಚನ ನೀಡಿದ ಡಾ. ವಾಸುದೇವ ಭಟ್ಟ ಹಂದಲಸು ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಸಪ್ತಾಹದ ಸಮಾರೋಪದ ಅಂಗವಾಗಿ ಶ್ರೀಕೃಷ್ಣ ಮೂಲಮಂತ್ರ ಹವನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ