ಸವಣೂರು: ಕಾಯಕವೇ ಕೈಲಾಸ ಎಂಬ ತತ್ವ ಸಿದ್ಧಾಂತವನ್ನು ಸಮಾಜಕ್ಕೆ ಸಾರಿ ಕ್ರಾಂತಿಯನ್ನು ಸೃಷ್ಟಿಸಿದವರು ಬಸವಣ್ಣನವರು. ಅವರ ತತ್ವಗಳನ್ನು ಪಾಲಿಸಿದರೆ ಜೀವನ ಸಾರ್ಥಕತೆ ಹೊಂದಲು ಸಾಧ್ಯವೆಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ತಿಳಿಸಿದರು.ಪಟ್ಟಣದ ಲಲಾಟೇಶ್ವರ ಮಂಗಲ ಭವನದಲ್ಲಿ ಭಾನುವಾರ ಜರುಗಿದ ತಾಲೂಕು ಬಣಜಿಗ ಸಮಾಜದ ತೃತೀಯ ಸಮಾವೇಶ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸುವ ಕೆಲಸ ಉತ್ತಮವಾಗಿದ್ದು, ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆದು ತಂದೆ- ತಾಯಿಗಳನ್ನು ಮತ್ತು ಸಮಾಜಕ್ಕೆ ಕೊಡುಗೆಯನ್ನು ನೀಡುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಸಮಾಜದ ಏಳ್ಗೆಗಾಗಿ ನನ್ನ ಅಳಿಲುಸೇವೆಯನ್ನು ನೀಡುತ್ತೇನೆ ಎಂದರು. ಬಣಜಿಗ ಸಮಾಜದ ಜನಗಣತಿ ಕೈಪಿಡಿ ಪುಸ್ತಕವನ್ನು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಬಿಡುಗಡೆ ಮಾಡಿ ಮಾತನಾಡಿ, ಯಾವ ವ್ಯಕ್ತಿ ವಿಭೂತಿಯನ್ನು ಧರಿಸಿ ಲಿಂಗದಾರಣೆಯನ್ನು ಮಾಡಿಕೊಂಡು ಭಕ್ತಿಯಿಂದ ಪೂಜಿಸುತ್ತಾನೋ ಅವನು ಲಿಂಗಾಯತ ಎನ್ನುವಂತದ್ದು ಅಂದಿನ ಕಾಲದಲ್ಲಿತ್ತು. ಆದರೆ, ಇಂದಿನ ರಾಜಕೀಯ ಹಿತಾಸಕ್ತಿಗೆ ಉಪಜಾತಿಗಳು ಹುಟ್ಟಿಕೊಂಡಿದೆ. ಇವೆಲ್ಲವನ್ನು ಮರೆತು ವೀರಶೈವ ಲಿಂಗಾಯತ ಒಂದೇ ಎನ್ನುವಂತ ಮನೋಭಾವನೆ ಬಂದಾಗ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದರು.ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಯಾಸೀರ್ಅಹ್ಮದ ಖಾನ್ ಪಠಾಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸವಣೂರು ತಾಲೂಕು ಬಣಜಿಗ ಸಮಾಜದ ಜನಗಣತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಶ್ರೀಕಾಂತ ದುಂಡಿಗೌಡ್ರ, ಎಸ್.ಎಸ್. ಶೆಟ್ಟರ, ಮಹಾಂತೇಶ ಮೆಣಸಿನಕಾಯಿ, ಸುಮಂತ ಸಿಂಧೂರ, ಮಲ್ಲಿಕಾರ್ಜುನ ಸಾಹುಕಾರ, ಮಂಜುನಾಥ ಶೆಟ್ಟರ, ಗುರು ಅಂಗಡಿ, ಶೇಖಪ್ಪ ಗುತ್ತಲ, ಮಂಜುನಾಥ ಬೆಣ್ಣಿ, ಶಿವಕುಮಾರ ತೆಗ್ಗಿಹಳ್ಳಿ ಸೇರಿದಂತೆ ಸಮಾಜದವರು ಇದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಸಿ.ವಿ. ಗುತ್ತಲ, ಮಂಜುನಾಥ ಕೊಟಗಿ ನಿರ್ವಹಿಸಿದರು.