ಕುಷ್ಟಗಿ: ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಸಮಾಜದಲ್ಲಿ ಗೌರವ ಪಡೆಯುವುದಲ್ಲದೆ ತನ್ನ ನಡೆ-ನುಡಿ,ಶಿಸ್ತು, ನೈತಿಕ ಮೌಲ್ಯಗಳ ಮೂಲಕ ಇತರರಿಗೆ ಮಾದರಿಯಾಗುತ್ತಾನೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಎಸ್.ವಿ. ಡಾಣಿ ಹೇಳಿದರು.
ವ್ಯಕ್ತಿತ್ವವು ಕೇವಲ ಬಾಹ್ಯ ರೂಪದಿಂದ ನಿರ್ಧಾರವಾಗುವುದಿಲ್ಲ, ಆಲೋಚನೆ,ಮಾತು, ವರ್ತನೆ ಹಾಗೂ ಸಮಾಜದ ಮೇಲಿನ ಹೊಣೆಗಾರಿಕೆಗಳಿಂದ ವ್ಯಕ್ತಿಯ ನಿಜವಾದ ವ್ಯಕ್ತಿತ್ವ ವ್ಯಕ್ತವಾಗುತ್ತದೆ ಎಂದು ಹೇಳಿದರು.
ಪ್ರಾಮಾಣಿಕತೆ, ಸಹನಶೀಲತೆ, ಪರಿಶ್ರಮ ಹಾಗೂ ಮಾನವೀಯ ಮೌಲ್ಯ ವ್ಯಕ್ತಿತ್ವ ಕಟ್ಟಿಕೊಡುವ ಪ್ರಮುಖ ಅಂಶಗಳಾಗಿವೆ. ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಗುರಿ ಹೊಂದಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಯುವಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಜೀವನ ಮಾಡಬೇಕು, ಹೊರತು ಸಂದೇಹ ಬರುವಂತೆ ಜೀವನ ಮಾಡಬಾರದು ಎಂದು ಹೇಳಿದ ಅವರು, ಶಿಕ್ಷಣವು ವ್ಯಕ್ತಿಯ ಜೀವನದ ದಿಕ್ಕನ್ನು ಬದಲಿಸುವ ಮಹತ್ವದ ಸಾಧನವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಮಹತ್ವ ಅರಿತು ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.
ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಸಮಾಜದ ಬಗ್ಗೆ ಜವಾಬ್ದಾರಿ ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು ಎಂದರು.