ರಾಣಿಬೆನ್ನೂರು:ಅಕ್ಕಮಹಾದೇವಿ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನುಷ್ಯ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ಬೇಸಿಗೆ ಧಾರ್ಮಿಕ ಶಿಬಿರ ಉದ್ಘಾಟಿಸಿದ ಸ್ಥಳೀಯ ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮಿಗಳು ಮಾತನಾಡಿ, ಮನಸ್ಸಿನ ಬಯಕೆಗೆ ಅವಕಾಶ ನೀಡದೇ ಅಕ್ಕಮಹಾದೇವಿಯಂತೆ ದೃಢ ಮನಸ್ಸಿನಿಂದ ಜೀವನದಲ್ಲಿ ಒಳ್ಳೆಯದನ್ನು ಸಾಧಿಸಿ ತೋರಿಸಬೇಕು. ಆ ಸಾಧನೆಗೆ ಈ ಬೇಸಿಗೆ ಧಾರ್ಮಿಕ ಶಿಬಿರ ಮಕ್ಕಳಿಗೆ ಮಾರ್ಗದರ್ಶಕವಾಗಲಿ ಎಂದರು.
ಅಕ್ಕಮಹಾದೇವಿ ಜಯಂತ್ಯುತ್ಸವದ ಅಂಗವಾಗಿ ಸ್ಥಳೀಯ ಕದಳಿ ವೇದಿಕೆ ಮತ್ತು ಶ್ರೀ ದಾನೇಶ್ವರಿ ಜಾಗ್ರತ ಅಕ್ಕನ ಬಳಗದ ಸಹೋದರಿಯರು ಅಕ್ಕಮಹಾದೇವಿ ತೊಟ್ಟಿಲು ಪೂಜೆ ನಾಮಕರಣ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿದರು. ಅಕ್ಕಮಹಾದೇವಿ ವಚನಗಳ ಸ್ಪರ್ಧೆಯ ವಿಜೇತರಿಗೆ ಗಾಯತ್ರಮ್ಮ ಕುರುವತ್ತಿ ಬಹುಮಾನಗಳನ್ನು ನೀಡಿದರು.ಅಕ್ಕಮಹಾದೇವಿಯ ಜನನ, ಬಾಲ್ಯ, ವೈರಾಗ್ಯ ಜೀವನ ಹಾಗೂ ಸಾಧನೆಯ ಬಗ್ಗೆ ರೋಟರಿ ಶಾಲೆಯ ಶಿಕ್ಷಕಿ ವೀಣಾ ಮಾಜಿಗೌಡರ ಉಪನ್ಯಾಸ ನೀಡಿದರು.
ಅಮೃತಗೌಡ ಹಿರೇಮಠ, ಬಸರಾಜಪ್ಪ ಪಟ್ಟಣಶೆಟ್ಟಿ, ಉಮೇಶ ಗುಂಡಗಟ್ಟಿ, ಸುನಂದಮ್ಮ ತಿಳುವಳ್ಳಿ, ವಿ.ವಿ. ಹರಪನಹಳ್ಳಿ, ಕಸ್ತೂರಿ ಪಾಟೀಲ, ಹಾಲಸಿದ್ದಯ್ಯ ಶಾಸ್ತ್ರಿಗಳು ಹಾಗೂ ಅಕ್ಕನ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.