ಅಗತ್ಯಕ್ಕಿಂತ ಹೆಚ್ಚು ಹಣ, ಆಸ್ತಿಯಿಂದ ಜೀವನ ಒತ್ತಡ

KannadaprabhaNewsNetwork | Published : Jun 16, 2025 2:55 AM

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಇಂದು ಮನುಷ್ಯ ಆಡಂಬರ ಜೀವನಕ್ಕೆ ಮಾರುಹೋಗಿ ಅಗತ್ಯಕ್ಕಿಂತ ಹೆಚ್ಚು ಹಣ, ಆಸ್ತಿ ಅಂತಸ್ತು ಗಳಿಸುವತ್ತ ಮುಖ ಮಾಡುತ್ತಿರುವುದರಿಂದ ಒತ್ತಡದ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಶರಣರ ಚಿಂತಕರ, ದಾರ್ಶನಿಕರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ನಾವು ಉತ್ತಮರಾಗಿ ಬಾಳಿ ಬದುಕಲು ಮತ್ತು ಗೌರವದಿಂದ ಕಾಣಲು ಸಾಧ್ಯ ಎಂದು ಬಸವನಬಾಗೇವಾಡಿಯ ಶಿಕ್ಷಕಿ ಗಿರಿಜಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಇಂದು ಮನುಷ್ಯ ಆಡಂಬರ ಜೀವನಕ್ಕೆ ಮಾರುಹೋಗಿ ಅಗತ್ಯಕ್ಕಿಂತ ಹೆಚ್ಚು ಹಣ, ಆಸ್ತಿ ಅಂತಸ್ತು ಗಳಿಸುವತ್ತ ಮುಖ ಮಾಡುತ್ತಿರುವುದರಿಂದ ಒತ್ತಡದ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಶರಣರ ಚಿಂತಕರ, ದಾರ್ಶನಿಕರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ನಾವು ಉತ್ತಮರಾಗಿ ಬಾಳಿ ಬದುಕಲು ಮತ್ತು ಗೌರವದಿಂದ ಕಾಣಲು ಸಾಧ್ಯ ಎಂದು ಬಸವನಬಾಗೇವಾಡಿಯ ಶಿಕ್ಷಕಿ ಗಿರಿಜಾ ಪಾಟೀಲ ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿರುವ ನಿವೃತ್ತ ಶಿಕ್ಷಕ ಮಹಾಂತೇಶ ಧನ್ನೂರ ನಿವಾಸದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕದಳಿ ವೇದಿಕೆ ನೇತೃತ್ವದಲ್ಲಿ ಏರ್ಪಡಿಸಿದ್ದ 39ನೇ ಸಂಚಿಕೆಯ ಶರಣ ಬೆಳಗು ಹುಣ್ಣಿಮೆಯ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತ ಅನುಭಾವದಲ್ಲಿ ಅವರು ಮಾತನಾಡಿದರು. ಜಗತ್ತು ಕಂಡ ಶ್ರೇಷ್ಠ ದೇಶ ಭಾರತ. ಭಾರತ ಕಂಡ ಶ್ರೇಷ್ಠ ನಾಡು ನಮ್ಮ ಕನ್ನಡ ನಾಡು. ಈ ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷದಲ್ಲಿ ಬರೆದಿರುವ ಒಂದು ಯುಗವೆಂದರೆ ಅದು 12ನೇ ಶತಮಾನ. ಇವತ್ತಿನ ಈ ಸಮಾಜಕ್ಕೆ ದಾರಿದೀಪ ವಾಗಿ ಅನೇಕ ವಚನಕಾರರ ಆದರ್ಶಗಳು ಜೀವಂತವಾಗಿವೆ. ಶಿವಶರಣರದಲ್ಲಿ ನಿಜಶರಣ ಎನಿಸಿಕೊಂಡ ಅಂಬಿಗರ ಚೌಡಯ್ಯ ತನ್ನ ಮಾತು ಮತ್ತು ಕೃತಿಗೂ ವ್ಯತ್ಯಾಸವಿಲ್ಲದಂತೆ ನಡೆದು ಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸಿದರು. ಶರಣರ ತತ್ವಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ. ವಿಶ್ವದಲ್ಲಿಯೇ ಭಾರತ ದೇಶವು ಹಲವಾರು ಮಹಾನ್ ವ್ಯಕ್ತಿಗಳು, ಚಿಂತಕರು, ಕ್ರಾಂತಿಕಾರರು ಹಾಗೂ ಸಾಧು ಸಂತರನ್ನು ಹೊಂದಿದ ಹೆಗ್ಗಳಿಕೆ ಪಡೆದಿದೆ. ಅಂತಹ ಮಹಾನ್ ಸಾಧಕರಿಂದ ಪ್ರತಿ ಯೊಬ್ಬರೂ ಪ್ರೇರೆಪಿತರಾಗಿ ಉತ್ತಮ ಶಿಕ್ಷಣ ಪಡೆದು ವಿಶ್ವದಲ್ಲಿಯೇ ನಮ್ಮ ದೇಶವನ್ನು ಜ್ಞಾನದ ಗುರು ಎಂದು ಹೆಸರಾಗುವಂತೆ ಶ್ರಮಿಸಬೇಕು ಎಂದರು.ಕದಳಿ ವೇದಿಕೆಯ ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ಮಾತನಾಡಿ, ಕದಳಿ ವೇದಿಕೆಯು ಮಹಿಳಾ ಸಮಾವೇಶ, ಮಹಿಳಾ ದಿನಾಚರಣೆ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸಾಧಕ ಮಹಿಳೆಯರಿಗೆ ಸನ್ಮಾನ ಸೇರಿದಂತೆ ಹಲವು ರೀತಿಯ ಸಾಮಾಜಿಕ ಕಳಕಳಿಯುಳ್ಳ ಚಟುವಟಿಕೆಗಳಿಂದ ಸದಾ ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

ಗಣ್ಯರಾದ ಎಚ್.ಎಸ್.ಪಾಟೀಲ, ಸಿ.ಬಿ.ಇಟಗಿ, ಚಂದ್ರಶೇಖರ ನಾಗರಾಳ, ಸಂಗಣ್ಣ ಕಂಚ್ಯಾಣಿ, ಎಸ್.ಎಸ್.ಹುನಗುಂದ, ರುದ್ರೇಶ ಕಿತ್ತೂರ, ಬಸವರಾಜ ಸಾವಳಗಿ, ಎಂ.ಬಿ.ಪಾಟೀಲ, ಡಾ.ಬೋರಮ್ಮ ಪೊಲೀಸ್ ಪಾಟೀಲ(ರಾಂಪೂರ), ಲಲಿತಾ ಕಟಗೇರಿ, ನೀಲಮ್ಮ ನಾವದಗಿ, ಸುಲೋಚನಾ ಸಜ್ಜನ, ನಿರ್ಮಲಾ ರಾಂಪುರ, ದ್ರಾಕ್ಷಾಯಣಿ ಮೋಟಗಿ, ಸಾವಿತ್ರಿ ಧನ್ನೂರ, ಭಾರತಿ ಪಾಟೀಲ, ಶಕುಂತಲಾ ಲಿಂಗದಳ್ಳಿ, ವಿಜಯಲಕ್ಷ್ಮೀ ಗಡೇದ, ಲಿಂಬೆಕ್ಕ ಇಟಗಿ, ಬಸವರಾಜ್ ಲಿಂಗದಳ್ಳಿ, ಬಿ.ಎನ್.ಚೌಡಾಪುರ, ಧನ್ನೂರ ಕುಟುಂಬದ ಸದಸ್ಯರು, ಪರಿಷತ್ ವೇದಿಕೆ ಪದಾಧಿಕಾರಿಗಳು, ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.