ಕನ್ನಡಪ್ರಭ ವಾರ್ತೆ ಚಾಮರಾಜನಗರಕಾಯಕ, ದಾಸೋಹ ಪರಿಕಲ್ಪನೆ ಕೊಟ್ಟು ಅನುಭವದ ಮೂಲಕ ಸ್ಥಾಪನೆಗೊಂಡು ಸಕಲ ಜೀವರಾಶಿಗಳನ್ನೊಳಗೊಂಡು ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಏಕೈಕ ಧರ್ಮ ಲಿಂಗಾಯತ ಧರ್ಮ ಅದು ಬಸವ ಧರ್ಮ ಎಂದು ಉತ್ತರ ಕರ್ನಾಟಕದ ಸಂತೇ ಕಡೂರು ಪ್ರಭುದೇವ ಜ್ಞಾನಯೋಗಾಶ್ರಮದ ನವಲಿಂಗಶರಣರು ಹೇಳಿದರು.ನಗರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತಮಠದ ವತಿಯಿಂದ ಬಸವ ಜಯಂತಿ ಮತ್ತು ಶರಣರ ಸ್ಮರಣೋತ್ಸವ ಅಂಗವಾಗಿ ಮಠದ ಆವರಣದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಬಸವ ದರ್ಶನದ ಬಗ್ಗೆ ಪ್ರವಚನ ನೀಡಿ ಮಾತನಾಡಿದರುಮೂಢನಂಬಿಕೆಗಳನ್ನು ತೊಡೆದು ಹಾಕಿ ಗಂಡು-ಹೆಣ್ಣು ಎಂಬ ಭೇದಬಾವವಿಲ್ಲದೇ ಕಾಯಕ ತತ್ವಕ್ಕೆ ಮಹತ್ವ ನೀಡಿ ಮಾನವ ಕಲ್ಯಾಣಕ್ಕಾಗಿ ಕಾಯಕ, ಶಿವಯೋಗ ಹಾಗೂ ದಾಸೋಹದ ಪರಿಕಲ್ಪನೆ ನೀಡಿ ಮೂಲಭೂತವಾದ ಹಸಿವನ್ನು ನೀಗಿಸಲು ಯಾರಿಗೂ ಅನ್ಯಾಯ ಮಾಡದಂತೆ, ಜೀವನೋದ್ಧಾರಕ್ಕಾಗಿ ತಾನು ಸಂತೃಪ್ತಿಗೊಂಡು, ಇತರರಿಗೆ ಸಹಾಯ ಮಾಡುವ ಕಾಯಕತ್ವ ನೀಡಿ, ಅನಂತರ ಆತ್ಮಶುದ್ಧಿಗಾಗಿ ಶಿವಯೋಗತ್ವ ನೀಡಿ, ಜೀವನ ಮೋಕ್ಷಕ್ಕಾಗಿ ದಾಸೋಹ ತತ್ವ ನೀಡಿದ ಏಕೈಕ ಗುರು ಬಸವಣ್ಣ ಎಂದರು. "ದೇಹದ ಮೇಲಿನ ಮೋಹ ಕಳೆಯಲು ಗುರು, ಮನಸ್ಸಿನ ಕೊಳೆಯನ್ನು ತೊಳೆಯಲು ಲಿಂಗ, ಧನ ಕನಕದ ಆಸೆ ತೊರೆಯಲು ಜಂಗಮಗಳೆಂಬ ತ್ರಿವಿಧಗಳನ್ನು ಪಾಲಿಸುತ್ತ ನಡೆಯುವವರೆ ನಿಜವಾದ ಶರಣರು ಅಂಗವನ್ನು ಲಿಂಗವನ್ನಾಗಿಸಲು ನಮ್ಮನ್ನು ನಾವು ಅರಿಯುವುದೇ ಪ್ರವಚನ ಯೋಗವಾಗಿದೆ " ಎಂದರು.
ಕನಕಪುರದ ಶ್ರೀಗಳಿಗೆ ಪಾದಪೂಜೆ
ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮಕ್ಕೆ ಬುಧವಾರ ಬೆಳಗ್ಗೆ ಕನಕಪುರದ ಶ್ರೀಗಳ ಪಾದಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು. ರಾತ್ರಿ ಭಜನೆ, ಭಕ್ತಿ ಗೀತೆ ಗಾಯನ ಹಾಗೂ ಭರತ ನಾಟ್ಯ ನಡೆಯಿತು. ಪ್ರಾಧ್ಯಾಪಕ ಶಿವರಾಜಪ್ಪ ಬಸವರಾಜಸ್ವಾಮಿಗಳು ಮತ್ತು ಸಿದ್ದಬಸವರಾಜ ಸ್ವಾಮೀಜಿ ನಡೆದು ಬಂದ ಹಾದಿ ಮತ್ತು ಅವರ ಕಾಯಕ ಮಹತ್ವದ ಬಗ್ಗೆ ಹೇಳಿ ಮಠ ಮಾನ್ಯಗಳಲ್ಲಿ ವಿದ್ಯೆ ಕಲಿತರೆ ಸಂಸ್ಕಾರ ಮತ್ತು ಶ್ರದ್ಧೆ ಗುಣ ಬೆಳೆಯತ್ತದೆ ಎಂದರು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖೋಖೋ ಪಟು ಕುರುಬರೂರಿನ ಕುಮಾರಿ ಚೈತ್ರಾರನ್ನು ಸನ್ಮಾನಿಸಲಾಯಿತು. ಗುರುವಾರ ಬೆಳಗ್ಗೆ 5 ಕ್ಕೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ, ಬೆಳಗ್ಗೆ 6 ಕ್ಕೆ ಷಟ್ ಸ್ಥಲ ಧ್ವಜಾರೋಹಣ ನೆರವೇರಿತು. ರಾತ್ರಿ ಮಠದ ಆವರಣದಲ್ಲಿ ಹಾಕಿರುವ ಭವ್ಯ ರಂಗಮಂದಿರಲ್ಲಿ ಬದನಗುಪ್ಪೆ ಗುರುಮಲ್ಲೇಶ್ವರ ನಾಟಕ ಮಂಡಳಿ ವತಿಯಿಂದ ಪ್ರಭುಲಿಂಗ ಲೀಲೆ ನಾಟಕ ಪ್ರದರ್ಶನಗೊಂಡಿತು. 2 ದಿನಗಳ ಕಾಲ ಎಲ್ಲರಿಗೂ ನಿರಂತರ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು, ಊಟಿಯ ಗುರುಬಸವ ಶಾಂತಿನಿಕೇತನ ಆಶ್ರಮದ ವತಿಯಿಂದ ವಚನ ಗಾಯನ ಹಾಗೂ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.