ಮತ ಬ್ಯಾಂಕ್‌ ರಾಜಕಾರಣಕ್ಕೆ ಲಿಂಗಾಯತ ಸಮಾಜ ಛಿದ್ರ

KannadaprabhaNewsNetwork | Published : Apr 24, 2025 12:03 AM

ಸಾರಾಂಶ

ಲಿಂಗಾಯತ ಸಮಾಜ ಛಿದ್ರ ಛಿದ್ರಗೊಳ್ಳಲು ಮತ ಬ್ಯಾಂಕ್‌ ರಾಜಕಾರಣವೇ ಪ್ರಮುಖ ಕಾರಣ. ನಮಗೆ ನಮ್ಮ ಧರ್ಮ ಮುಖ್ಯ ಹೊರತು ರಾಜಕಾರಣ, ರಾಜಕಾರಣಿಗಳು ಮುಖ್ಯವಲ್ಲ. ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯತರೆಲ್ಲರೂ ಒಂದಾಗಬೇಕು. ಲಿಂಗಾಯತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹಿಮ್ಮೆಟ್ಟಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲಿಂಗಾಯತ ಸಮಾಜ ಛಿದ್ರ ಛಿದ್ರಗೊಳ್ಳಲು ಮತ ಬ್ಯಾಂಕ್‌ ರಾಜಕಾರಣವೇ ಪ್ರಮುಖ ಕಾರಣ. ನಮಗೆ ನಮ್ಮ ಧರ್ಮ ಮುಖ್ಯ ಹೊರತು ರಾಜಕಾರಣ, ರಾಜಕಾರಣಿಗಳು ಮುಖ್ಯವಲ್ಲ. ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯತರೆಲ್ಲರೂ ಒಂದಾಗಬೇಕು. ಲಿಂಗಾಯತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹಿಮ್ಮೆಟ್ಟಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಹೇಳಿದರು.

ನಗರದ ಎಸ್‌.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಂಗಳವಾರ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಮತ್ತು ಬಸವಪರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ವಚನದರ್ಶನ ಮಿಥ್ಯ - ಸತ್ಯ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವುದೇ ಪಕ್ಷದ ಸರ್ಕಾರ ಬರುತ್ತದೆ ಹೋಗುತ್ತದೆ. ಆದರೆ, ನಮಗೆ ಧರ್ಮ ಶಾಶ್ವತ. ನಮ್ಮ ಧರ್ಮವನ್ನು ಹದಗೆಡಿಸಿದವರೇ ರಾಜಕಾರಣಿಗಳು. ಜಾತಿಗೊಂದು ಮಠಗಳಾಗಿ ವ್ಯವಸ್ಥೆ ಹದಗೆಟ್ಟಿದೆ. ಇದರಿಂದಾಗಿ ಲಿಂಗಾಯತರಿಗೆ ದಿಕ್ಕು ತೋಚದಂತಾಗಿದೆ. ರಾಜಕಾರಣಿಗಳ ಬೆನ್ನು ಹತ್ತಿ ಹಾಳಾಗಿದ್ದೆ ಹೆಚ್ಚು. ಅವರಿಂದ ಲಿಂಗಾಯತ ಸಮಾಜಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ ಎಂದು ದೂರಿದರು.ಲಿಂಗಾಯತರನ್ನು ವೈದಿಕ ಶೈವರೆಂದು ಬಿಂಬಿಸುವ ಪ್ರಯತ್ನ ನಡೆದಿದೆ. ಲಿಂಗಾಯತ ತತ್ವಗಳಿಗೆ ವಿರೋಧವಾದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ. ಬಸವಾದಿ ಶರಣರ ಮತ್ತು ವಚನ ಸಾಹಿತ್ಯದ ಕುರಿತು ನಡೆಯುತ್ತಿರುವ ಅಪಪ್ರಚಾರ ನಿಲ್ಲಬೇಕು. ಉಪಜಾತಿ, ಒಳಪಂಗಡಗಳ ರಾಜಕಾರಣದಿಂದಾಗಿ ಲಿಂಗಾಯತರೆಲ್ಲ ದಿಕ್ಕಾಪಾಲಾಗಿದ್ದಾರೆ. ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಎಲ್ಲ ಮಠಗಳಲ್ಲಿ ಹರಿದು ಹಂಚಿ ಹೋಗಿರುವ ಲಿಂಗಾಯಿತರನ್ನೆಲ್ಲ ಒಗ್ಗೂಡಿಸಬೇಕಿದೆ ಎಂದರು.ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ 1.35 ಕೋಟಿ. ಅದರ ಬದಲಾಗಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ 1.25 ಕೋಟಿ. ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಕೋಟ್ಯಂತರ ಲಿಂಗಾಯತರು ಇದ್ದಾರೆ. ಮತ ಗಳಿಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಲಿಂಗಾಯತ ಸಮಾಜ ಛಿದ್ರ ಛಿದ್ರಗೊಂಡಿದೆ. ವಚನಗಳನ್ನು ಭಾರತದ ಪರಂಪರೆಗೆ ವಿರುದ್ಧವೆಂದು ಬಿಂಬಿಸುವ ಪ್ರಯತ್ನ ನಡೆಯಿತು. ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ಲಿಂಗಾಯತರಿಗೆ ಬೇರೆಯವರು ರಾಷ್ಟ್ರೀಯತೆಯನ್ನು ಕಲಿಸುವ ಅಗತ್ಯ ಇಲ್ಲ ಎಂದು ತಿಳಿಸಿದರು.ಪತ್ರಕರ್ತ ಪ್ರೊ.ಸಿದ್ದು ಯಾಪಲಪರವಿ ಮಾತನಾಡಿ, ಕೆಲವರು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸಿ ಜಾಗತಿಕ ಲಿಂಗಾಯತ ಮಹಾಸಭೆಯ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಬದಲಾದ ವಾತಾವರಣಕ್ಕೆ ತಕ್ಕಂತೆ ನಾವು ಕೂಡ ಸಾಮಾಜಿಕ ಜಾಲತಾಣದ ಮೂಲಕ, ಡಿಜಿಟಲ್ ಮಾಧ್ಯಮದ ಮೂಲಕ ಸತ್ಯವನ್ನು ತಿಳಿಸುವ ಕಾರ್ಯ ಮಾಡಬೇಕು. ವಿಚಾರ ಸಂಕಿರಣಗಳು, ಚರ್ಚೆಗಳು ನಡೆಯುವಂತಾಗಬೇಕು. ಅಧಿಕಾರಕ್ಕೆ ಬೆನ್ನು ಹತ್ತದೆ ಈ ಕಾರ್ಯ ಕೈಗೊಳ್ಳುವಂತಾಗಬೇಕು ಎಂದರು.ವಚನ ದರ್ಶನ ಮಿಥ್ಯ- ಸತ್ಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಗದಗ ತೋಂಟದಾರ್ಯಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ವಚನ ದರ್ಶನ ಗ್ರಂಥದಲ್ಲಿ ಬಸವಾದಿ ಶಿವಶರಣರ ಆಶಯಕ್ಕೆ ವಿರುದ್ಧವಾದ ವಿಚಾರವನ್ನು ಮುದ್ರಿಸಿ, ಪ್ರಚಾರ ಮಾಡಲಾಗಿದೆ. ಜಾತಿ ವ್ಯವಸ್ಥೆಯನ್ನು ಮುಂದುವರಿಸುವ ಪ್ರಯತ್ನ ಮಾಡಲಾಗಿದೆ. ಪುನಃ ಪುರೋಹಿತಶಾಹಿ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಿವೆ. ವೈದಿಕ ವಿಚಾರಧಾರೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಿದ ವಿಚಾರಧಾರೆಯೇ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ತನ್ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.ಸಮಾರಂಭ ಉದ್ಘಾಟಿಸಿದ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅವರು, ವಚನದರ್ಶನ ಗ್ರಂಥವೇ ಮಿಥ್ಯ, ಬಸವಣ್ಣನವರ ಲಿಂಗಾಯತ ಧರ್ಮವೇ ಸತ್ಯ ಈ ಕುರಿತು ಜನರಿಗೆ ತಿಳಿಸುವ ಕಾರ್ಯವಾಗಬೇಕು. ನಾವು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಕಷ್ಟ ತಪ್ಪಿದ್ದಲ್ಲ ಎಂದರು.ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಪ್ರೊ.ಕೆ.ಎಸ್.ಕೌಜಲಗಿ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು. ರಾಷ್ಟ್ರೀಯ ಬಸವದಳ ಬೆಳಗಾವಿ ಅಧ್ಯಕ್ಷ ಅಶೋಕ ಬೆಂಡಿಗೇರಿ, ಬೆಳಗಾವಿ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇವಣ್ಣವರ, ಲಿಂಗಾಯತ ಮಹಾಸಭೆಯ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ ಗುಡಿಸಿ ಉಪಸ್ಥಿತರಿದ್ದರು. ಅಶೋಕ ಮಳಗಲಿ ಸ್ವಾಗತಿಸಿದರು. ಪ್ರೊ.ಮಂಜುನಾಥ ಶರಣಪ್ಪನವರ ನಿರೂಪಿಸಿದರು. ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಅಂಗಡಿ ವಂದಿಸಿದರು.

Share this article