ಲಿಂಕ್ ಕೆನಾಲ್: ಮತ್ತೊಮ್ಮೆ ಪರಿಶೀಲನೆಗೆ ಸಕಾರಾತ್ಮಕ ಸ್ಪಂದನೆ

KannadaprabhaNewsNetwork |  
Published : Jul 06, 2025, 01:48 AM ISTUpdated : Jul 06, 2025, 01:12 PM IST
ಸೋಮಣ್ಣ | Kannada Prabha

ಸಾರಾಂಶ

ಜಿಲ್ಲೆಯ ಜನರ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ಕೊಂಡೊಯ್ಯುವ ಯೋಜನೆ ಅವೈಜ್ಞಾನಿಕವಾಗಿದೆ. ಈ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂಬ ನಮ್ಮ ಒತ್ತಾಯಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ

 ತುಮಕೂರು :   ಜಿಲ್ಲೆಯ ಜನರ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ಕೊಂಡೊಯ್ಯುವ ಯೋಜನೆ ಅವೈಜ್ಞಾನಿಕವಾಗಿದೆ. ಈ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂಬ ನಮ್ಮ ಒತ್ತಾಯಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು. 

 ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಯಿತು. ನಮ್ಮಗಳ ಬೇಡಿಕೆ ಸಂಬಂಧವೂ ನೀರಾವರಿ ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದರು. ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕುಣಿಗಲ್ ಪಾಲಿನ 3.04 ಟಿಎಂಸಿ ನೀರನ್ನು ಗುರುತ್ವಾಕರ್ಷಣೆ ಮೂಲಕ ಕೊಂಡೊಯ್ಯಲು ನಮ್ಮ ಅಭ್ಯಂತರವಿಲ್ಲ. ಆದರೆ ಪೈಪ್‌ಲೈನ್ ಮೂಲಕ ಅವೈಜ್ಞಾನಿಕವಾಗಿ ಕೊಂಡೊಯ್ಯಬಾರದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು. 

ನಮ್ಮ ಭಾಗದ ರೈತರು ಈ ಯೋಜನೆಯಿಂದ ಕಂಗಾಲಾಗಿ ಸಿಡಿದೆದ್ದಿದ್ದಾರೆ. ಹಾಗಾಗಿ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಸಂಸ್ಥೆಯ ತಜ್ಞರಿಂದ ಸಮೀಕ್ಷೆ ಮಾಡಿಸಿ ವರದಿ ತಯಾರಿಸುವಂತೆಯೂ ಒತ್ತಾಯಿಸಿದ್ದೇವೆ. ಇದಕ್ಕೆ ಸ್ಪಂದಿಸಿರುವ ನೀರಾವರಿ ಸಚಿವರು, ತಾವು ಸಹ ತಜ್ಞರು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ ಎಂದರು.ಬೆಂಗಳೂರನ್ನು ಹೊರತುಪಡಿಸಿ ಅತಿ ಶೀಘ್ರಗತಿಯಲ್ಲಿ ತುಮಕೂರು ನಗರ ಬೆಳೆಯುತ್ತಿದೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರಿನ ಸಮಸ್ಯೆಯಾಗಬಾರದು. 

ತುಮಕೂರು ನಗರ, ಗ್ರಾಮಾಂತರ, ಗುಬ್ಬಿ, ಸಿ.ಎಸ್.ಪುರ ಹೋಬಳಿಗಳಿಗೆ ಎಷ್ಟು ನೀರು ಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳಾದವು ಎಂದರು. ಜಿಲ್ಲೆಯ ಜನರಿಗೆ ಅನಾನುಕೂಲವಾಗದಂತೆ ಯೋಜನೆ ಮಾಡುತ್ತೇವೆ, ತಜ್ಞರ ಸಲಹೆಯನ್ನು ಪಡೆಯುತ್ತೇವೆ ಎಂದು ನೀರಾವರಿ ಸಚಿವರು ತಿಳಿಸಿದ್ದಾರೆ.

 ತುಮಕೂರಿಗೆ ಹೇಮಾವತಿ ನೀರಿನ ವಿಚಾರದಲ್ಲಿ ಸಣ್ಣ ಸಮಸ್ಯೆಯೂ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ತಿಳಿಸುವಂತೆಯೂ ಸಭೆಯಲ್ಲಿ ಹೇಳಿದ್ದೇವೆ ಎಂದರು.ಜನರ ನೆಮ್ಮದಿಯನ್ನು ಹಾಳು ಮಾಡಬೇಡಿ. ಕುಣಿಗಲ್‌ಗೆ ಹಂಚಿಕೆಯಾಗಿರುವ 3.04 ಟಿ.ಎಂ.ಸಿ. ನೀರು ಕೊಂಡೊಯ್ಯಲು ನಮ್ಮ ಅಭ್ಯಂತರವಿಲ್ಲ. ಆದರೆ ಈ ನೀರನ್ನು ಅವೈಜ್ಞಾನಿಕವಾಗಿ ಪೈಪ್‌ಲೈನ್ ಮೂಲಕ ಕೊಂಡೊಯ್ಯದೆ ಓಪನ್ ಚಾಲನ್ ಮುಖೇನ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದೇವೆ ಎಂದು ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಿಕಪ್ ವಾಹನ ಅಡ್ಡಗಟ್ಟಿ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಹಸಿ ಅಡಕೆ ದರೋಡೆ
ಪೋಕ್ಸೋ ಕಾಯ್ದೆ ಸರಿಯಾಗಿ ಜಾರಿಯಾದರೆ ಮಾತ್ರ ಅಪ್ರಾಪ್ತೆಯರ ರಕ್ಷಣೆ