)
ಯಲಬುರ್ಗಾ: ಸಂಗೀತವು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂಗೀತ ಆಲಿಸುವುದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಚೈತನ್ಯ ದೊರೆಯುತ್ತದೆ ಎಂದು ಕುದರಿಮೋತಿಯ ಮೈಸೂರು ಮಠದ ಶ್ರೀವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಸಂಗೀತವು ಪೂರ್ವಜರಿಂದ ಬಂದಿರುವ ಅಮೂಲ್ಯ ಪರಂಪರೆಯಾಗಿದೆ. ಆಧುನಿಕ ಜೀವನದ ಒತ್ತಡದ ನಡುವೆಯೂ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು. ಸಂಗೀತ ಆಲಿಸುವುದರಿಂದ ಮನಸ್ಸಿನ ದುಗುಡ ಹಾಗೂ ಒತ್ತಡ ದೂರವಾಗಿ ಜೀವನದಲ್ಲಿ ಉಲ್ಲಾಸ ಮೂಡುತ್ತದೆ. ಯುವಜನತೆ ಸಂಗೀತದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ನಮ್ಮ ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.
ಮುಖಂಡ ಶರಣಪ್ಪ ಬಸವಂತಪ್ಪ ಗಾಣಗೇರ ಮಾತನಾಡಿ, ಮನುಷ್ಯ ಸಂಗೀತದಿಂದ ದೂರವಾಗುತ್ತಿರುವುದರಿಂದ ಏಕಾಗ್ರತೆಯ ಕೊರತೆ ಹಾಗೂ ಮಾನವ ಸಂಬಂಧಗಳಲ್ಲಿ ಅಂತರ ಹೆಚ್ಚಾಗುತ್ತಿದೆ. ಸಂಗೀತ ಆಲಿಸುವುದರಿಂದ ಮನಸ್ಸಿನ ದುಗುಡ–ದುಮ್ಮಾನ ದೂರವಾಗಿ ನೆಮ್ಮದಿ ದೊರೆಯುತ್ತದೆ ಎಂದರು.ಅಶ್ವಿನಿ ಚಿರತನಾಳ ಪ್ರಾರ್ಥನಾ ಗೀತೆ ಹಾಡಿದರು. ಉಮಾಮಹೇಶ್ವರಿ ಎಸ್. ಹೂಗಾರ ಸಂಗೀತ, ಶರಣಬಸವ ಲಿಂಗನಬಂಡಿ ಭಕ್ತಿಗೀತೆ, ಮಂಜುನಾಥ ಸತ್ಯಪ್ಪ ಸುಣಗಾರ ಸುಗಮ ಸಂಗೀತ, ಹನುಮಂತಕುಮಾರ ಯರೆಹಂಚಿನಾಳ ಹಿಂದೂಸ್ಥಾನಿ ಸಂಗೀತ ಪ್ರಸ್ತುತಪಡಿಸಿದರು. ಪ್ರತಾಪಕುಮಾರ ಹಿರೇಮಠ ತಬಲಾ ವಾದನ, ಬಸವರಾಜ ಇಲಾಲಪುರ ಸಹಕರಿಸಿದರು.