ಕಂಪ್ಲಿ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡಿರುವ ಮಹಾಮಹಿಮಾ ಪವಾಡಪುರುಷ ಕಲಬುರ್ಗಿ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನಕ್ಕೆ ಜು. 26ರಂದು ಶ್ರೀ ನೀಲಕಂಠಾರ್ಯ ತಾತನವರು ಚಾಲನೆ ನೀಡಿದರು.
ಕಂಪ್ಲಿ: ಶ್ರಾವಣ ಮಾಸದಲ್ಲಿ ಪುರಾಣ, ಪ್ರವಚನ, ಪುಣ್ಯಕಥೆಗಳನ್ನು ಆಲಿಸುವುದರಿಂದ ಮನಸ್ಸು ಶುದ್ಧವಾಗಲು ಸಾಧ್ಯವಾಗುತ್ತದೆ ಎಂದು ಶ್ರೀ ನೀಲಕಂಠಾರ್ಯ ತಾತನವರು ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರಾವಣಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮಹಾಮಹಿಮಾ ಪವಾಡಪುರುಷ ಕಲಬುರ್ಗಿ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯ ಸಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾನೆ. ಸಂಸಾರದ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರ ದೂರ ಮಾಡಿ ಶಾಂತಿ, ಸಹನೆ, ತಾಳ್ಮೆ ಮೂಡಬೇಕಾದರೆ ಪುರಾಣ ಕೇಳುವುದು ಅವಶ್ಯಕ. ಪುರಾಣ, ಪ್ರವಚನ ಆಲಿಸುವುದರಿಂದ ಕೆಟ್ಟ ವಿಚಾರಗಳು ದೂರವಾಗಿ ಒಳ್ಳೆಯ ಭಾವನೆಗಳು ಮನಸ್ಸಲ್ಲಿ ಮೂಡುತ್ತವೆ. ಅಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ವಿಚಾರಗಳನ್ನು ಹೊಂದಿರುವ ಇಂತಹ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಹೆಚ್ಚು ಭಕ್ತರು ಪಾಲ್ಗೊಳ್ಳಬೇಕು ಎಂದರು.
ಕಾಮಧೇನು ಗೋಶಾಲೆ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಬಸವರಾಜ ಶಾಸ್ತ್ರಿ ಮಾತನಾಡಿ, ಗೋ ಶಾಲೆಯಲ್ಲಿ ಪಾಠಶಾಲೆ ಮಕ್ಕಳಿಗೆ ವಿಭೂತಿ ತಯಾರಿಕೆ, ಗೋಸಾಕಣೆ ಕುರಿತು ತರಬೇತಿ ನೀಡಲು ಉದ್ದೇಶಿಸಿದ್ದು, ಮಕ್ಕಳನ್ನು ತರಬೇತಿಗೆ ಕಳುಹಿಸುವಂತೆ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.