ರೇಡಿಯೋ ಕೇಳುವುದು ಶೈಕ್ಷಣಿಕ ಪ್ರಗತಿಗೆ ಸಹಕಾರಿ: ಹಾಸನ ಆಕಾಶವಾಣಿ ಮುಖ್ಯಸ್ಥೆ ಸುಜಾತಾ ಎಸ್. ತಳವಾರ್

KannadaprabhaNewsNetwork |  
Published : Mar 27, 2026, 01:45 AM IST
25ಎಚ್ಎಸ್ಎನ್12 :  | Kannada Prabha

ಸಾರಾಂಶ

ಆಕಾಶವಾಣಿ ವತಿಯಿಂದ ಕಾಲೇಜು ಹಂತಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವುದರಿಂದ ಇಂದಿನ ಮಕ್ಕಳನ್ನು ಮತ್ತೊಮ್ಮೆ ಆಕಾಶವಾಣಿ ಕಾರ್ಯಕ್ರಮಗಳ ಆಲಿಸುವಿಕೆಗೆ ಸಹಕಾರಿಯಾಗಲಿದೆ.

ಕನ್ನಡಪ್ರಭವಾರ್ತೆ, ಹಾಸನ

ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಯುವಕ-ಯುವತಿಯರು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುವುದರಿಂದ ಶೈಕ್ಷಣಿಕ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಹಾಸನ ಆಕಾಶವಾಣಿ ಮುಖ್ಯಸ್ಥೆ ಸುಜಾತಾ ಎಸ್. ತಳವಾರ್ ಅಭಿಪ್ರಾಯಪಟ್ಟರು.

ನಗರದ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಾಸನ ಆಕಾಶವಾಣಿ ಕೇಂದ್ರದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹಲವು ದಿನಮಾನಗಳಿಂದ ಯುವಕರಲ್ಲಿ ಆಕಾಶವಾಣಿ ಕೇಳುವಿಕೆ ಕಡಿಮೆಯಾಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನ ಆಕಾಶವಾಣಿ ಪ್ರಸಾರ ಮಾಡಿಕೊಂಡು ಬರುತ್ತಿದೆ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಕಾರ್ಯಕ್ರಮವು ಯುವಜನರಿಗೆ ಸಹಕಾರಿಯಾಗಿದ್ದು, ಬಿಡುವಿನ ವೇಳೆಯಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಲಿಸಬೇಕು. ಅದರಲ್ಲೂ ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿಯೇ ವಿನೂತನ ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಡಾ. ವಿಕ್ರಂ ಬಿ. ಮಾತನಾಡಿ, ಆಕಾಶವಾಣಿಯನ್ನು ಪ್ರತಿನಿತ್ಯ ಆಲಿಸಿದ ಅನೇಕರು ಇಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ನಾವು ಚಿಕ್ಕ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಬರುವ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಾಗೂ ಸುಮಧುರ ಗೀತೆಗಳನ್ನು ಆಲಿಸಿ ಜೀವನದಲ್ಲಿ ಒಂದಿಷ್ಟು ಒಳ್ಳೆಯ ಗುಣ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಹಾಗೆಯೇ ಕನ್ನಡ ಭಾಷೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಕಲಿಯಲು ರೇಡಿಯೋ ಸಹಕಾರಿಯಾಯಿತು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಸಿ. ನವೀನ್ ಮಾತನಾಡಿ, ಆಕಾಶವಾಣಿ ವತಿಯಿಂದ ಕಾಲೇಜು ಹಂತಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವುದರಿಂದ ಇಂದಿನ ಮಕ್ಕಳನ್ನು ಮತ್ತೊಮ್ಮೆ ಆಕಾಶವಾಣಿ ಕಾರ್ಯಕ್ರಮಗಳ ಆಲಿಸುವಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಆಕಾಶವಾಣಿ ತಾಂತ್ರಿಕ ಸಹಾಯಕ ರಾಜು ಮ್ಯಾತ್ಯು, ಉದ್ಘೋಷಕ ಷಣ್ಮುಖ ಎಚ್.ವಿ. ತಾಂತ್ರಿಕ ಸಹಾಯಕಿ ಲಿಖಿತ, ಹಾಸನಂಬ ರೂರಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪಿ.ಎಸ್. ಮಂಜೇಗೌಡ, ಖಜಾಂಚಿ ಈಶ್ವರಪ, ಆಡಳಿತಾಧಿಕಾರಿ ಡಾ.ಎಂ.ಡಿ. ನಿತ್ಯಾನಂದ ಹಾಗೂ ಉಪನ್ಯಾಸಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಶಂಕರರ ಜೀವನವೇ ನಮಗೆ ಸಂದೇಶ: ಶ್ರೀ ವಿಜಯ ಗುರೂಜೀ
ವೈರಮುಡಿ ಉತ್ಸವದಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಿ: ಐಜಿಪಿ ಬೋರಲಿಂಗಯ್ಯ ಸೂಚನೆ