ಹಿರೇಕೆರೂರು: ಪ್ರಸ್ತುತದಲ್ಲಿ ನಾಡು-ನುಡಿಯ ಘನತೆಯನ್ನು ಕಾಪಾಡುತ್ತಿರುವುದು ಸಾಹಿತ್ಯಿಕ ವಲಯವಾಗಿದೆ ಎಂದು ಸುಣಕಲ್ಬಿದರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಹೊನ್ನಪ್ಪ ಹೇಳಿದರು.
ನಾಡಿನ ಚರಿತ್ರೆ, ಕರ್ನಾಟಕದ ಆಳರಸರ ಕನ್ನಡ ಕೊಡುಗೆ, ಕನ್ನಡಕ್ಕೆ ಸಂಬಂಧಿಸಿದ ಶಾಸನಗಳು, ಕನ್ನಡ ಛಂದಸ್ಸು ಮತ್ತು ವ್ಯಾಕರಣ, ಕನ್ನಡ ಭಾಷೆ ಬೆಳೆದು ಬಂದ ಬಗೆ, ಕನ್ನಡ ಜಾನಪದ ಮತ್ತು ಜಾನಪದ ಕೃತಿಗಳು, ಕನ್ನಡಿಗರ ಬಗೆಗೆ ಬಂದ ಜೀವನ ಚರಿತ್ರೆಗಳು ಇತ್ಯಾದಿಯಾಗಿ ಕನ್ನಡ ಸಾಹಿತ್ಯ ಚರಿತ್ರೆಗೆ ಪೂರಕವಾದ ಲೇಖನಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಐಕ್ಯೂಎಸಿ ಸಂಚಾಲಕ ಪ್ರೊ. ಪ್ರಸನ್ನಕುಮಾರ ಜೆ., ಹೊಸದಾಗಿ ಶುರುಮಾಡಿರುವ ಸಾಹಿತ್ಯ ಸ್ಪಂದನ ಕನ್ನಡ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಕುರಿತು ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಸಂತೋಷ್ ಎಸ್.ಜಿ. ಪ್ರಾಸ್ತಾವಿಕ ಮಾತನಾಡಿದರು.