ಸಾಹಿತ್ಯ ಶ್ರಾವಣ- ಉಪನ್ಯಾಸ ಕಾರ್ಯಕ್ರಮ

KannadaprabhaNewsNetwork |  
Published : Aug 11, 2025, 12:35 AM IST
ಫೋಟೊಪೈಲ್-೧೦ಎಸ್ಡಿಪಿ೪- ಸಿದ್ದಾಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸಾಹಿತ್ಯ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು.

ಸಿದ್ದಾಪುರ: ಬದುಕನ್ನು ಪ್ರತಿನಿಧಿಸುವ ಸಾಹಿತ್ಯ ಸಾರ್ವಕಾಲಿಕವಾಗಿ ಉಳಿಯುತ್ತದೆ. ಬರಹಗಾರ ತನ್ನ ಬರವಣಿಗೆಯ ಮೂಲಕ ಸಮಾಜವನ್ನು ಶುದ್ಧೀಕರಿಸಿದಂತೆ ತನ್ನನ್ನೂ ಶುದ್ಧೀಕರಿಸಿಕೊಂಡಾಗ ನಿಜವಾದ ಸಾಹಿತ್ಯ ರೂಪುಗೊಳ್ಳುತ್ತದೆ ಎಂದು ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಹೇಳಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಶ್ರಾವಣದ ಅಂಗವಾಗಿ ಇಂದಿರಾನಗರದ ಚಿನ್ಮಯಿ ನಿವಾಸದಲ್ಲಿ ಆಯೋಜಿಸಿದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಬದುಕು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ ಸಾಹಿತ್ಯ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದು ಇರಲಾಗದ್ದು. ಬದುಕಿನಿಂದ ಹುಟ್ಟುತ್ತ, ಬದುಕಿನಿಂದಲೇ ಬೆಳೆಯುವದು ಸಾಹಿತ್ಯ. ಅದು ಕೊಡುವ ಮೌಲ್ಯಗಳು ಮುಖ್ಯವಾದದ್ದು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಬದುಕಿನ ಅನುಭವಗಳ ಸಂವಹನ ಸಾಹಿತ್ಯದಲ್ಲಿ ಸಾಧ್ಯವಾಗುತ್ತದೆ. ಸಾಹಿತ್ಯ ಮತ್ತು ಬದುಕು ನಿಕಟವಾಗಿ ಬೆಸೆದುಕೊಂಡಿರುವಂಥದ್ದು.ಅನುಭವ, ಅಧ್ಯಯನ, ಸಮಾಜದ ಜೊತೆಗಿನ ಸಂಬಂಧ ಎಲ್ಲವನ್ನೂ ಒಳಗೊಂಡ ಸಾಹಿತ್ಯ ಕಲಾತ್ಮಕವಾಗಿದ್ದಾಗ ಓದುರನ್ನು ತಟ್ಟುತ್ತದೆ. ಸಮಚಿತ್ತದ ನೋಟ ನೋಟ ಸಾಹಿತ್ಯಕ್ಕೆ ಅಗತ್ಯ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಅನುಭವಗಳೆಂಬ ದಾರದಿಂದ ಹೆಣೆಯುವ ಕಸೂತಿ ಸಾಹಿತ್ಯ. ಬದುಕಿನಿಂದ ಪಡೆದ ಕಲಾತ್ಮಕತೆ ಕೂಡ ಆ ಕಸೂತಿಗೆ ಅಲಂಕಾರವಾಗಿ ಒದಗಿದಾಗ ಅದಕ್ಕೆ ಸಾರ್ಥಕತೆ ಒದಗುತ್ತದೆ. ಸಾಹಿತ್ಯದಿಂದ ಸುತ್ತಲಿನದನ್ನು ಶುದ್ಧೀಕರಿಸುವ ಪ್ರಯತ್ನಕ್ಕಿಂತ ತನ್ನನ್ನು ಶುದ್ಧೀಕರಿಸಿಕೊಳ್ಳುವ ಎಚ್ಚರ ಸಾಹಿತಿಗಳಿಗೆ ಇರಬೇಕು ಎಂದರು.

ಮುಖ್ಯ ಅತಿಥಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚಿ.ಎಸ್. ಗೌಡರ್ ಮಾತನಾಡಿ, ಸಮಾಜದ ಉನ್ನತಿಗೆ ಪೂರಕವಾದ ಸಾಹಿತ್ಯ ಕೃಷಿ ಹೆಚ್ಚಬೇಕು. ಆ ಕುರಿತು ಹೆಚ್ಚಿನ ಸಹಕಾರ ಒದಗಬೇಕು ಎಂದರು.

ತಾಲೂಕು ಕಸಾ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ ಮಾತನಾಡಿ ಇಂದಿನ ದಿನಗಳಲ್ಲಿ ಸಾಹಿತ್ಯ ಅಧ್ಯಯನಕ್ಕೆ ವಿಪುಲ ಅವಕಾಶಗಳಿದ್ದು ಯುವ ಪೀಳಿಗೆ ಸಾಹಿತ್ಯದ ಸಮಗ್ರ ಅಧ್ಯಯನಕ್ಕೆ ತೊಡಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ವ್ಯಕ್ತಿಯ ಆಂತರಿಕ ವಿಚಾರಗಳನ್ನು ಸಾಹಿತ್ಯದ ಮೂಲಕ ವ್ಯಕ್ತಗೊಳಿಸಲು ಸಾಧ್ಯ. ಬದುಕನ್ನು ಕಟ್ಟಿಕೊಡುವ ಸಾಹಿತ್ಯಕ್ಕೆ ಪರಿವರ್ತನಾಶೀಲತೆಯಿದೆ ಎಂದರು.

ತಾಲೂಕು ಕಸಾಪ ಖಜಾಂಚಿ ಪಿ.ಬಿ.ಹೊಸೂರ ಉಪಸ್ಥಿತರಿದ್ದರು.

ಈ ಕುರಿತು ಜರುಗಿದ ಸಂವಾದದಲ್ಲಿ ಕೆ.ಬಿ.ವೀರಲಿಂಗನಗೌಡ್ರು, ಲಕ್ಷ್ಮಣ ಬಡಿಗೇರ, ಶಿವಾನಂದ ಹೊನ್ನೆಗುಂಡಿ, ವಿಠ್ಠಲ ಅವರಗುಪ್ಪ, ದಿವಾಕರ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಕುಶಲಕರ್ಮಿ ರಾಮು ಆಚಾರಿ ಹಾಗೂ ಅವರ ಸಹೋದರರ ಪತ್ನಿ ರೂಪಾ ಆಚಾರಿ ಅವರನ್ನು ಸನ್ಮಾನಿಸಲಾಯಿತು.ತಾಲೂಕು ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು. ಶಿಕ್ಷಕ ಮಾರುತಿ ನಾಯ್ಕ ನಿರೂಪಿಸಿ,ವಂದಿಸಿದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ