ಕನ್ನಡಪ್ರಭ ವಾರ್ತೆ ಮಂಡ್ಯ
ಭಾಷೆಯ ಬೆಳವಣಿಗೆಗೆ ಸಾಹಿತ್ಯ ಪ್ರಮುಖ ಅಳತೆಗೋಲಾಗಿದೆ. ಭಾಷೆ ಬೆಳೆದಷ್ಟೂ ಸಾಹಿತ್ಯ ವೃದ್ಧಿಸುತ್ತದೆ. ಭಾಷೆ ಮತ್ತು ಸಾಹಿತ್ಯ ವೃದ್ಧಿಸಿದರೆ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಎಂದು ಜಿಲ್ಲಾ ಕಸಾಪ ಮತ್ತು ಸಮ್ಮೇಳನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಅಭಿಪ್ರಾಯಪಟ್ಟರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನರಂಜನ ಕೂಟದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಭಾಷೆಗಳ ಆಕ್ರಮಣದ ನಡುವೆಯೂ ಕನ್ನಡವನ್ನು ಉಳಿಸಿಕೊಂಡು ಬಂದಿದ್ದೇವೆ. ಭಾಷೆಯ ಬಳಕೆಯಿಂದ ಅದು ಸಮೃದ್ಧವಾಗಿ ಬೆಳವಣಿಗೆ ಕಾಣುತ್ತದೆ. ಆದ್ದರಿಂದ ಕನ್ನಡಿಗರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಕಾಲ ದೇಶಗಳನ್ನು ಮೀರಿದ ಕಾಲಜ್ಞಾನ ಬೆಳೆಸಿಕೊಳ್ಳಬಹುದು. ಇದರಿಂದ ವೈಚಾರಿಕ ಚಿಂತನೆ ವೃದ್ಧಿಸುತ್ತದೆ ಎಂದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಪ್ರಪಂಚದ ಬೇರೆ ಬೇರೆ ಭಾಷೆಗಳ ಮೇಲೆ ತನ್ನ ಪ್ರಭಾವ ಬೀರಿದೆ. ಇಂತಹ ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ರವಾನೆಯ ವಾಹಕವಾಗಿದೆ. ಅದೊಂದು ಮಾತನಾಡುವ, ಬರೆಯುವ ಭಾಷೆಯಷ್ಟೇ ಅಲ್ಲ, ನಮ್ಮ ನಡೆ-ನುಡಿ ಸಂಸ್ಕಾರ ಹಿರಿತನವನ್ನು ಮುಂದಿನ ಪೀಳಿಗೆಗೆ ರವಾನೆ ಮಾಡುವ ಪ್ರಮುಖ ಸಾಧನವಾಗಿದೆ ಎಂದರು.
ಕನ್ನಡಕ್ಕೆ ಅಂಚೆ ಇಲಾಖೆ ಸಾಕಷ್ಟು ಕೊಡುಗೆ ನೀಡಿದೆ. ಮನೆಮನೆಗೆ ಪತ್ರ ತರುವ ಅಂಚೆಯಣ್ಣ ಅನಕ್ಷರಸ್ಥರಿಗೆ ಕನ್ನಡದ ಅಕ್ಷರ ಜ್ಞಾನ ತಲುಪಿಸುವ ಕೆಲಸ ಮಾಡಿದ್ದಾನೆ. ಕನ್ನಡ ಭಾಷೆ ಸಮೃದ್ಧಿಯನ್ನು ಹೊಂದಿದೆ. ವೈಜ್ಞಾನಿಕತೆಯಿಂದ ಸಂಸ್ಕೃತಿ ಸಂಸ್ಕಾರಕ್ಕೆ ಸ್ವಲ್ಪ ಹಿನ್ನಡೆ ಆಗಿರಬಹುದು. ಆದರೆ, ಕನ್ನಡ ಭಾಷೆ ಎಂದೆಂದಿಗೂ ಪ್ರಸ್ತುತವಾಗಿರುತ್ತದೆ ಎಂದರು.ಅಂಚೆ ಕಚೇರಿಯ ಪ್ರಧಾನ ವ್ಯವಸ್ಥಾಪಕ ರೋಹಿಣೇಶ್ ಮಾತನಾಡಿ, ಹಲವು ಪ್ರಮುಖರು ಕನ್ನಡದ ಏಕೀಕರಣಕ್ಕಾಗಿ ಹೋರಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಐಟಿ ಬಿಟಿಗಳಲ್ಲೂ ಕನ್ನಡ ಬಳಕೆಯಾಗುತ್ತಿರುವುದು ಅಭಿಮಾನದ ಸಂಗತಿ. ಎಲ್ಲ ಜನರಿಗೂ ಇಂದು ಕನ್ನಡ ಬೇಕಾಗಿದೆ ಎಂದರು
ಸಮಾರಂಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಹರ್ಷ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಂಘಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಅಂಚೆ ಇಲಾಖೆಯ ಎಂ.ಸಿ.ಭಾಸ್ಕರ್, ಮುರಳಿ,ಸಿಬ್ಬಂದಿ ಪಾಲ್ಗೊಂಡಿದ್ದರುಸಮಾರಂಭದಲ್ಲಿ ಮೀರಾ ಶಿವಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.