ಕನ್ನಡಪ್ರಭ ವಾರ್ತೆ ಮಡಿಕೇರಿ
ಅತ್ಯಂತ ಪ್ರಭಾವಶಾಲಿಯಾದ ಸಾಹಿತ್ಯ ಕ್ಷೇತ್ರ ಸಾಮಾಜಿಕ ಬದಲಾವಣೆಗಳಿಗೂ ಪ್ರೇರಕ ಶಕ್ತಿಯಾಗಿದೆ ಎಂದು ಸಮಾಜ ಸೇವಕ ಹಾಗೂ ಕರ್ನಾಟಕ ರಾಜ್ಯ ಒಕ್ಕಗಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ‘ಬಹುಭಾಷಾ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುವ ಬಹು ಅಮೂಲ್ಯವಾದ ನೈಜ ವಿಚಾರಧಾರೆಗಳನ್ನು ಆಧರಿಸಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಾಹಿತ್ಯ ಸೃಷ್ಟಿಸಿ ಪುಸ್ತಕದ ರೂಪದಲ್ಲಿ ಹೊರತರುವುದು ಶ್ರೇಷ್ಠ ಕಾರ್ಯವಾಗಿದೆ. ಕವಿಗಳು ಸದಾ ಸಮಾಜದ ಭಾಗವಾಗಿದ್ದಾರೆ, ರಾಜಕೀಯ ರಹಿತವಾಗಿ, ಭ್ರಷ್ಟಾಚಾರದ ಸೋಂಕಿಲ್ಲದೆ, ಪ್ರಶಾಂತವಾದ ಮನಸ್ಸು ಮತ್ತು ಆಗಾಧವಾದ ಕಲ್ಪನಾಶೀಲತೆ ಹೊಂದಿದವರಾಗಿದ್ದಾರೆ. ನಮ್ಮ ಸುತ್ತಮುತ್ತಲ ಪ್ರಾಕೃತಿಕ ವೈಭವ ಮತ್ತು ಆಗುಹೋಗುಗಳನ್ನು ಅಕ್ಷರ ರೂಪಕ್ಕಿಳಿಸುವ ಸಾಹಿತ್ಯ ಕಲೆ ಅದ್ಭುತವೆಂದು ಬಣ್ಣಿಸಿದರು.ಸೈನಿಕರು, ಪತ್ರಕರ್ತರು, ಕವಿಗಳು ಹಾಗೂ ಆರಕ್ಷಕರು ತಮ್ಮದೇ ಆದ ಕಾರ್ಯಕ್ಷೇತ್ರದ ಮೂಲಕ ನಾಡಿನ ಅಖಂಡತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆ ಮೂಲಕ ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ವಿಶೇಷ ಕಾಣಿಕೆ ಮತ್ತು ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ.
ತಮ್ಮ ಆಂತರ್ಯದ ಭಾವನೆಗಳಿಗೆ ಅಕ್ಷರಗಳ ರೂಪ ನೀಡುವ ಕವಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಸಾಹಿತ್ಯದ ಸವಿಯನ್ನು ಪ್ರತಿಯೊಬ್ಬರು ಓದಿನ ಮೂಲಕ ಪಡೆಯುವಂತಾಗಬೇಕು ಎಂದು ಹರಪಳ್ಳಿ ರವೀಂದ್ರ ಕರೆ ನೀಡಿದರು.ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಜಿ.ಎಫ್., ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್ ಅವರು ಮಾತನಾಡಿ, ಕವಿಗಳು ತಮ್ಮ ಕಲ್ಪನೆಗಳನ್ನು ಪದಗಳ ಮೂಲಕ ವರ್ಣಿಸುತ್ತಾರೆ. ಕವಿಗಳ ಬದುಕಿನ ಅವಿಭಾಜ್ಯ ಅಂಗ ಲೇಖನಿಯೇ ಆಗಿದೆ. ಅತ್ಯಂತ ಪ್ರಭಾವಶಾಲಿಯಾದ ಲೇಖನಿಯ ಮೂಲಕ ನಮ್ಮೆಲ್ಲರ ಕನಸುಗಳನ್ನು ಅವರು ಅಕ್ಷರ ರೂಪದಲ್ಲಿ ಸಾಕಾರಗೊಳಿಸುವಂತಾಗಬೇಕು ಎಂದು ಆಶಿಸಿದರು.
ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ ಅವರು ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಮನುಷ್ಯನ ಮನಸ್ಸನ್ನು ಪರಿವರ್ತಿಸುವಲ್ಲಿ ಕವಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಕಾವ್ಯ ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಸಮಾಜದ ಕಷ್ಟ ಕಾರ್ಪಣ್ಯಗಳನ್ನು ಜನರ ಮುಂದಿಡಲು ಯಾರು ಪ್ರಯತ್ನಿಸುತ್ತಾರೋ ಅವರು ಕವಿಗಳಾಗಲು ಸಾಧ್ಯವೆಂದು ಹೇಳಿದರು.ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್ ಅವರು ಮಾತನಾಡಿ, ಕೋಗಿಲೆಯ ಧ್ವನಿ ಕೇಳಲು ಚಂದ, ಕವಿಗಳ ಅಕ್ಷರಮಾಲೆ ಓದಲು ಚಂದ ಎಂದರು.
ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಸಾಹಿತಿ ಸುನೀತಾ ಲೋಕೇಶ್, ಬಹುಭಾಷಾ ಕವಿಗೋಷ್ಠಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಕವಲಪಾರ, ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಗೌರವಾಧ್ಯಕ್ಷ ಕುಡೆಕಲ್ ಸಂತೋಷ್, ಸದಸ್ಯರಾದ ಎಸ್.ಜಿ.ಉಮೇಶ್, ಎಂ.ಯು.ಹನೀಫ್, ಪಿ.ವಿ.ಪ್ರಭಾಕರ್, ಎಂ.ಎಸ್.ನಾಸಿರ್, ಎಂ.ಪಿ.ಅನುಷಾ, ಹೆಚ್.ಎನ್.ಲಕ್ಷ್ಮೀಶ್, ಸಯ್ಯದ್ ಇರ್ಫಾನ್, ಚೋಕಿರ ಅನಿತಾ ದೇವಯ್ಯ, ಅಂಜಲಿ ಅಶೋಕ್, ಶ್ರೀ ರಕ್ಷಾ ಉಪಸ್ಥಿತರಿದ್ದರು. ದಸರಾ ಸಮಿತಿ ಸದಸ್ಯರಾದ ವಿಜಯ್ ಹಾನಗಲ್, ಓಂಶ್ರೀ ದಯಾನಂದ ಕೂಡಕಂಡಿ, ಪಿ.ಎಂ.ರವಿ, ಅಂಕಿತಾ ಕಡ್ಲೇರ ಅತಿಥಿಗಳ ಪರಿಚಯ ಮಾಡಿದರು. ಮೌಲ್ಯ ಬಜೆಕೋಡಿ ಪ್ರಾರ್ಥಿಸಿದರು.ಕಾವ್ಯ ಕಲರವ ಅನಾವರಣ:
ಸಮಾರಂಭದಲ್ಲಿ ಬಹುಭಾಷಾ ಕವಿಗೋಷ್ಠಿಗೆ ಆಯ್ಕೆಯಾದ ಕವನಗಳನ್ನು ಒಳಗೊಂಡ ‘ಕಾವ್ಯ ಕಲರವ'''' ಕವನ ಸಂಕಲನವನ್ನು ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷರಾದ ಸುನೀತಾ ಲೋಕೇಶ್ ಅನಾವರಣಗೊಳಿಸಿದರು.ಇದೇ ಸಂದರ್ಭ ಲೇಖಕಿ ಡಿ.ಹೆಚ್.ಪುಷ್ಪ ಅವರ ‘ಸಂವೇದನೆ'''''''' ಕವನ ಸಂಕಲನ ಹಾಗೂ ಕೆ.ಶೋಭಾ ರಕ್ಷಿತ್ ಅವರ ‘ಮನ ಸೆಳೆದ ಹಿಮಗಿರಿ'''''''' ಪ್ರವಾಸ ಕಥನವನ್ನು ಕಿನ್ನಾಳ ರಾಜ್ ಅವರು ಬಿಡುಗಡೆಗೊಳಿಸಿದರು.
*ಸನ್ಮಾನ*ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಕರ್ನಾಟಕ ಒಕ್ಕಗಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಕೆ.ಜಿ.ಎಫ್., ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್, ನಗರಸಭೆಯ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಹಾಗೂ ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
*ಸಂತಾಪ*ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಎಸ್.ಎಲ್.ಭೈರಪ್ಪ ಅವರ ನಿಧನಕ್ಕೆ ಸಭೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿತು.
*ಪುಷ್ಪ ನಮನ*ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿರುವ ಕುವೆಂಪು ಪುತ್ಥಳಿಗೆ ಕವಯಿತ್ರಿ ಹಾಗೂ ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷೆ ಸುನೀತಾ ಲೋಕೇಶ್ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ನಗರ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.