ಧಾರವಾಡ: ಪಂಚ ಗ್ಯಾರಂಟಿ ಯೋಜನೆಗಳು ವಿಶ್ವ ಸಂಸ್ಥೆಯ ಶ್ಲಾಘನೆ ಪಡೆದಿವೆ. ಮಹಿಳೆಯರು, ಬಡವರು, ಅಬಲರು ಈ ಯೋಜನೆಗಳ ಸಹಾಯದಿಂದ ಸ್ವಂತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಖುತ್ತಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆಯಲ್ಲಿ ಅವರು ಮಾತನಾಡಿದರು. ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ಪಡಿತರ ಅಂಗಡಿಗಳಲ್ಲಿ ಮಾಹಿತಿ ಫಲಕ ಅಳವಡಿಸುವಿಕೆ ಬಾಕಿ ಇದೆ. ಗೃಹ ಲಕ್ಷ್ಮಿ ಯೋಜನೆಯ ಕೆಲವು ಅರ್ಹ ಫಲಾನುಭವಿಗಳಿಗೆ ಜಿಎಸ್ಟಿ ಸಮಸ್ಯೆ ಆಗಿದೆ. ಯುವನಿಧಿ ಫಲಾನುಭವಿಗಳ ವಿವರ ನೀಡುವುದು ಬಾಕಿ ಇದೆ. ಈ ಎಲ್ಲ ಸಮಸ್ಯೆಗಳ ಕುರಿತು ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಪ್ರಾರಂಭದಿಂದ ಇಲ್ಲಿಯ ವರೆಗೆ 24.32 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಪ್ರಾರಂಭಗಿಂತ ಮೊದಲು ಜಿಲ್ಲೆಯಲ್ಲಿ 949 ಬಸಗಳಿದ್ದು, ಯೋಜನೆ ಜಾರಿಗೆ ನಂತರ 1034 ಬಸ್ಸುಗಳು ಸಂಚಾರ ಮಾಡುತ್ತಿವೆ. ನಿತ್ಯ 3.37 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಸಾರಿಗೆ ಬಸ್ಗಳನ್ನು ಕೋರಿಕೆಯ ನಿಲ್ಲುಗಡೆ ಇದ್ದಲ್ಲಿ, ಅತಿ ಹೆಚ್ಚು ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ನಿಲ್ಲಿಸಬೇಕು. ಎಲ್ಲ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂಬ ಸಲಹೆ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5,11,746 ಫಲಾನುಭವಿಗಳು ಇದ್ದಾರೆ. ಪ್ರತಿ ತಿಂಗಳು ಅಂದಾಜು ₹23 ಕೋಟಿ ಮೊತ್ತದ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅನ್ನ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,59,168 ಫಲಾನುಭವಿಗಳಿದ್ದಾರೆ ಎಂದ ಅವರು, ಯುವನಿಧಿ ಯೋಜನೆಯಡಿ ಇಲ್ಲಿಯ ವರೆಗೆ ಒಟ್ಟು ಸ್ವೀಕೃತವಾದ ಅರ್ಜಿಗಳು 7,980. ಡಿ.ಬಿ.ಟಿ ಮೂಲಕ ಸಹಾಯಧನ ವರ್ಗಾವಣೆಗೊಂಡ ಫಲಾನುಭವಿಗಳ ಸಂಖ್ಯೆ 6,111. ಒಟ್ಟು ₹10.76 ಕೋಟಿ ಮೊತ್ತ ಫಲಾನುಭವಿಗಳಿಗೆ ಜಮೆ ಆಗಿದೆ ಎಂದರು.ಜಿಪಂ ಸಿಇಓ ಭುವನೇಶ ಪಾಟೀಲ, ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಮುರಗಯ್ಯಸ್ವಾಮಿ ವಿರಕ್ತಮಠ, ರತ್ನಾ ತೇಗೂರಮಠ, ಶಾಂತಪ್ಪ ಅಕ್ಕಿ, ಸುಧೀರ ಬೋಳಾರ, ರೇಹನ್ ರಝಾ ಐನಾಪೂರಿ ಸೇರಿದಂತೆ ಪ್ರಾಧಿಕಾರದ ಸದಸ್ಯರು ಇದ್ದರು. ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ವಂದಿಸಿದರು.