ಕನ್ನಡಪ್ರಭ ವಾರ್ತೆ, ತುಮಕೂರುಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿ ಮಾದರಿ ಕುರಿತು ಈ ಬಾರಿಯ ತಮ್ಮ ಆಯವ್ಯಯ ಪತ್ರದಲ್ಲಿ ಪ್ರಸ್ತಾಪಿಸಿ ಖ್ಯಾತ ಆರ್ಥಿಕ ತಜ್ಞ ಅಮರ್ತ್ಯ ಸೇನ್ಅವರ ಮಾತನ್ನುಉಲ್ಲೇಖಿಸಿದ್ದಾರೆ. ಆದರೆ, ಅವರು ಮಂಡಿಸಿದ ದಾಖಲೆಯ 17 ನೇ ಬಜೆಟ್ನಲ್ಲಿ ದಾಖಲೆ ಸಾಲ ಮಾಡಿದ ಮಾಹಿತಿ ಬಿಟ್ಟು ಯಾವ ಅಭಿವೃದ್ಧಿ ಯೋಜನೆಯ ಪ್ರಸ್ತಾಪ ಇದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ಗೌಡರು ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಜನರನ್ನು ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆಯೇ ಹೊರತುಅವರನ್ನು ಸಶಕ್ತಗೊಳಿಸುತ್ತಿಲ್ಲ ಎಂದು ವಿಷಾದಿಸಿದರು. ಸರ್ಕಾರದಲ್ಲಿ ಹೆಚ್ಚು ಕಡಿಮೆ 3 ಲಕ್ಷ ಹುದ್ದೆಗಳು ಖಾಲಿ ಇವೆ. ಧಾರವಾಡದಲ್ಲಿ ಯುವಕರು ಬೀದಿಗೆ ಇಳಿದರು ಎಂದು 56 ಸಾವಿರ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಹೊರಟಿದ್ದೀರಿ. ಆದರೆ, ನೇಮಕಾತಿ ಮಾಡುವ ಕೆಪಿಎಸ್ಸಿ ಸಂಸ್ಥೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ಹಿಂದಿನ ಅಧಿವೇಶನದಲ್ಲಿಯೂ ನಾನು ಈ ಕುರಿತು ಮಾತನಾಡಿದ್ದೆ. ಯುಪಿಎಸ್ಸಿ ಮಾದರಿಯಲ್ಲಿ ನಾವೂ ಕಾಲ ಕಾಲಕ್ಕೆ ನೇಮಕಾತಿ ಮಾಡಬೇಕು. ಅದಕ್ಕಾಗಿ ಪ್ರಾಮಾಣಿಕ ಮತ್ತು ಪಾರದರ್ಶಕವಾದ ಒಂದು ವ್ಯವಸ್ಥೆಯನ್ನುರೂಪಿಸಬೇಕು.ಈಗ ಕೆಪಿಎಸ್ಸಿ ನೇಮಕಾತಿಯನ್ನೇ ಮಾಡುವುದಿಲ್ಲ. ಮಾಡಿದರೂ ಫಲಿತಾಂಶ ಪ್ರಕಟವಾದ ಕೂಡಲೇ ಇಡೀ ಕೆಪಿಎಸ್ಸಿ ವಿರುದ್ಧ ಭ್ರಷ್ಟಾಚಾರ ಮತ್ತು ಅಕ್ರಮದ ಆರೋಪಗಳು ಕೇಳಿ ಬರುತ್ತವೆ. ಈ ಸಾರಿಯೂ ಪ್ರಧಾನಿವರೆಗೆ ದೂರು ಹೋಗಿದೆ ಎಂದರು.
ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು 25 ಎಕರೆ ಜಾಗ ಕೊಡುವುದಾಗಿ ಈ ಬಜೆಟ್ನಲ್ಲಿ ಪ್ರಸ್ತಾಪ ಇದೆ. ಬಸವಣ್ಣವನರ ತತ್ವಗಳಲ್ಲಿ, ಸಿದ್ಧಾಂತಗಳಲ್ಲಿ ಅಪಾರ ವಿಶ್ವಾಸಇಟ್ಟು ನಡೆದಾಡುವ ದೇವರು ಎನ್ನುವ ಹಾಗೆ ನಡೆದುಕೊಂಡ, ನೂರು ಕಾಲ ಬಾಳಿ ಇಡೀ ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಡಾ.ಶಿವಕುಮಾರ ಸ್ವಾಮಿಗಳ ಹೆಸರು ತುಮಕೂರು ವಿಶ್ವವಿದ್ಯಾಲಯಕ್ಕೆಇಡಬೇಕು ಎಂದು ಸುರೇಶ್ಗೌಡರು ಮನವಿ ಮಾಡಿದರು.