ಪ್ರವಾಸಿ ತಾಣಗಳಿಗೆ ಬೀಗ, ಪ್ರವಾಸೋದ್ಯಮಕ್ಕೆ ಬರ!

KannadaprabhaNewsNetwork |  
Published : Aug 10, 2026, 02:30 AM IST
ಜಲಪಾತ ಹಾಗೂ ಕಡಲತೀರ. | Kannada Prabha

ಸಾರಾಂಶ

ಜಿಲ್ಲೆಯ ಬಹುತೇಕ ಜಲಪಾತಗಳು ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿರುವುದರಿಂದ ಪ್ರವಾಸಿಗರು ನಿರಾಶರಾಗಿದ್ದಾರೆ. ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ.

ಜಿಲ್ಲೆಯ ಬಹುತೇಕ ಜಲಪಾತ, ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡದ ಪ್ರಕೃತಿ ಸೌಂದರ್ಯಕ್ಕೆ ಮಳೆಗಾಲದಲ್ಲಿ ಇನ್ನಷ್ಟು ಜೀವಕಳೆ. ಧೋ ಎಂದು ಸುರಿಯುವ ಮಳೆ, ಹಸಿರು ಹೊದ್ದ ಬೆಟ್ಟ-ಗುಡ್ಡಗಳು, ಮೈದುಂಬಿ ಧುಮ್ಮಿಕ್ಕುವ ಜಲಪಾತಗಳು... ಈ ದೃಶ್ಯ ಸವಿಯಲೆಂದೇ ದೂರದೂರುಗಳಿಂದ ಪ್ರವಾಸಿಗರು ಜಿಲ್ಲೆಗೆ ಬರುತ್ತಾರೆ. ಆದರೆ ಸುರಕ್ಷತೆ ಹೆಸರಿನಲ್ಲಿ ಜಿಲ್ಲೆಯ ಬಹುತೇಕ ಜಲಪಾತಗಳು ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿರುವುದರಿಂದ ಪ್ರವಾಸಿಗರು ನಿರಾಶರಾಗಿದ್ದಾರೆ. ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ.

ಮಳೆಗಾಲದಲ್ಲಿ ಜಲಪಾತಗಳು ಮೈದುಂಬಿ ಹರಿಯುವುದೇ ಅವುಗಳ ವಿಶೇಷ. ಇದೇ ಅವಧಿಯಲ್ಲಿ ಜಲಪಾತಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ. ಆದರೆ ಜಲಪಾತಗಳ ಬಳಿ ಸುರಕ್ಷತಾ ವ್ಯವಸ್ಥೆ ಕಲ್ಪಿಸುವ ಬದಲು ಪ್ರವಾಸಿಗರ ಪ್ರವೇಶವನ್ನೇ ನಿರ್ಬಂಧಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಪ್ರವಾಸೋದ್ಯಮ ವಲಯದಲ್ಲಿ ಕೇಳಿಬರುತ್ತಿದೆ.

ಸುರಕ್ಷತೆ ಮುಖ್ಯ, ಬಂದ್ ಪರಿಹಾರವಲ್ಲ:

ಜಲಪಾತಗಳ ಬಳಿ ಬ್ಯಾರಿಕೇಡ್, ಎಚ್ಚರಿಕೆ ಫಲಕ, ಜೀವರಕ್ಷಕ ಸಿಬ್ಬಂದಿ, ನಿಯಂತ್ರಿತ ಪ್ರವೇಶ, ಅಪಾಯಕಾರಿ ಪ್ರದೇಶಗಳಿಗೆ ತಡೆಗೋಡೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಿ, ನಿಗದಿತ ಸಮಯದಲ್ಲಿ ಪ್ರವೇಶ ಕಲ್ಪಿಸುವ ವ್ಯವಸ್ಥೆಯೂ ಸಾಧ್ಯ. ಅಪಾಯದ ಸಂದರ್ಭಗಳಲ್ಲಿ ಮಾತ್ರ ನಿರ್ದಿಷ್ಟ ಸ್ಥಳಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಬಹುದು. ಆದರೆ ಎಲ್ಲವನ್ನೂ ಏಕಾಏಕಿ ಮುಚ್ಚುವುದು ಶಾಶ್ವತ ಪರಿಹಾರವಲ್ಲ ಎಂಬುದು ಪ್ರವಾಸೋದ್ಯಮ ತಜ್ಞರ ಅಭಿಪ್ರಾಯ.

ಇನ್ನು ಯಾಣಕ್ಕೂ ಹೋಗುವಂತಿಲ್ಲ. ಮಳೆಗಾಲದಲ್ಲಿ ಸಮುದ್ರ ಅಪಾಯಕಾರಿಯಾಗಿರುವುದರಿಂದ ಮುರ್ಡೇಶ್ವರ, ಗೋಕರ್ಣ ಕಡಲತೀರಗಳಲ್ಲಿ ಜಲಸಾಹಸ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ.

ಇದರಿಂದ ಪ್ರವಾಸಿಗರನ್ನೇ ನಂಬಿಕೊಂಡಿರುವ ಹೋಟೆಲ್‌, ಹೋಂಸ್ಟೇ, ಪ್ರವಾಸಿ ವಾಹನ, ಮಾರ್ಗದರ್ಶಕರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಸ್ಥಳೀಯರ ಆದಾಯಕ್ಕೂ ಪೆಟ್ಟು ಬಿದ್ದಿದೆ.

ಮಳೆಗಾಲದ ಸೌಂದರ್ಯ ಬೇಸಿಗೆಯಲ್ಲಿ ಸಿಗುವುದೇ?:

ಜಲಪಾತದ ವೈಭವ ನೋಡಲು ಪ್ರವಾಸಿಗರು ಮಳೆಗಾಲದಲ್ಲೇ ಬರುತ್ತಾರೆ. ಮಳೆ ನಿಂತು ನೀರಿನ ಹರಿವು ಕ್ಷೀಣಿಸಿದ ಬಳಿಕ ಜಲಪಾತಗಳನ್ನು ನೋಡಲು ಪ್ರವಾಸಿಗರು ಏಕೆ ಬರಬೇಕು ಎಂಬ ಪ್ರಶ್ನೆಯೂ ಇದೆ. ಹೀಗಾಗಿ ಸುರಕ್ಷತೆ ಹೆಸರಿನಲ್ಲಿ ಪ್ರವಾಸೋದ್ಯಮಕ್ಕೆ ಬೀಗ ಹಾಕುವ ಬದಲು, ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿ ನಿಯಂತ್ರಿತ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಪ್ರಕೃತಿಯ ಸೊಬಗನ್ನು ಬಂದ್ ಮಾಡುವುದಲ್ಲ, ಅಪಾಯವನ್ನು ಬಂದ್ ಮಾಡುವುದು ಜಿಲ್ಲಾ ಆಡಳಿತದ ಹೊಣೆ. ಉತ್ತರ ಕನ್ನಡದ ಮಳೆಗಾಲದ ಪ್ರವಾಸೋದ್ಯಮಕ್ಕೆ ಹೊಸ ಸುರಕ್ಷತಾ ಮಾದರಿ ರೂಪಿಸುವ ಅಗತ್ಯ ಈಗ ಎದುರಾಗಿದೆ.ನಿರ್ಬಂಧದಿಂದ ಪ್ರವಾಸಿ ಚಟುವಟಿಕೆ ಕುಂಠಿತಗೊಂಡಿದೆ. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಸಿಬ್ಬಂದಿ ನೇಮಿಸಿ, ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿ ಚಟುವಟಿಕೆ ಆರಂಭಿಸಲು 13 ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಕೊಡುವುದಾಗಿ ತಿಳಿಸಿದ್ದೇನೆ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಮಂಗಳಗೌರಿ ಭಟ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ: ವಿಜಯಕುಮಾರ ಪಾಟೀಲ
ಪ್ರತಿಭಾ ಪುರಸ್ಕಾರ ಮಕ್ಕಳ ಸಾಧನೆ ಜವಾಬ್ದಾರಿ ಹೆಚ್ಚಿಸುವುದು-ಶಾಸಕ ಬಸವರಾಜ