ಯಾದಗಿರಿಯಲ್ಲಿ ಜುಲೈ 12ರಂದು ಲೋಕ್‌ ಅದಾಲತ್‌

KannadaprabhaNewsNetwork | Published : Jun 5, 2025 2:32 AM
Lok Adalat to be held in Yadgir on July 12

-ಕಕ್ಷಿದಾರರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪ್ರಧಾನ, ಸತ್ರ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಸಲಹೆ

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಬರುವ ಜುಲೈ 12 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್‌. ಜೆ. ಮರುಳಸಿದ್ದಾರಾಧ್ಯ ಹೇಳಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಈ ಲೋಕ್‌ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕೆಂದರು.

ಕಳೆದ ಬಾರಿ ಅಂದರೆ, ಮಾ.8ರಂದು ನಡೆದ ಲೋಕ್‌ ಅದಾಲತ್‌ನಲ್ಲಿ ಸಂಧಾನಕ್ಕೆ ಒಳಪಡಲು ಇದ್ದ ಒಟ್ಟು 8800 ಪ್ರಕರಣಗಳಲ್ಲಿ 5207 ಪ್ರಕರಣಗಳು ರಾಜೀ ಮೂಲಕ ಸಂಧಾನ ಮಾಡುವ ಮೂಲಕ ಶೇ.70ರಷ್ಟು ಗುರಿ ತಲುಪಲಾಗಿದೆ ಎಂದ ಅವರು, ಈ ಸಲ 15000 ಪ್ರಕರಣಗಳು ಇದ್ದು, ಸಾಧ್ಯವಾದಷ್ಟು ಹೆಚ್ಚಿನ ಪ್ರಕರಣಗಳು ರಾಜೀ ಸಂಧಾನ ಮಾಡಿಕೊಳ್ಳಲು ಕಕ್ಷಿದಾರರಿಗೆ ಮತ್ತು ವಕೀಲರಿಗೆ ಸೂಚಿಸಲಾಗಿದೆ ಎಂದರು.

ಇದೊಂದು ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನದ ವಿಶೇಷ ಅವಕಾಶವಿರುವ ಅದಾಲತ್ ಆಗಿದ್ದು, ನ್ಯಾಯಾಲಯದಲ್ಲಿ ದಾಖಲಾಗದ ಪ್ರಕರಣಗಳು ಸಹ ಇಲ್ಲಿ ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಾಧೀಶರು ಹೇಳಿದರು.

ರಾಜಿಯಾಗಬಲ್ಲ ಅಪರಾಧಿಕ, ಬ್ಯಾಂಕ್ ವಸೂಲಾತಿ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ, ಸಾಲ ವಸೂಲಾತಿ, ಕಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ಚೆಕ್ಕು ಅಮಾನ್ಯದ, ಮೋಟಾರು ಅಪಘಾತ ಪರಿಹಾರ, ಕಾರ್ಮಿಕ ವಿವಾದ, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂಸ್ವಾಧೀನ, ವೈವಾಹಿಕ - ಕುಟುಂಬ ನ್ಯಾಯಾಲಯ ಮತ್ತು ರಾಜೀಯಾಗಬಲ್ಲ ಸಿವಿಲ್ ಹಾಗೂ ಇತರೆ ಎಲ್ಲ ಪ್ರಕರಣಗಳು ಈ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ರಾಜೀ ಸಂಧಾನ ಮಾಡಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಾಧೀಶ ಮರುಳಸಿದ್ದಾರಾಧ್ಯ ಅವರು ಹೇಳಿದರು.

ಜಿಲ್ಲೆಯ ಒಟ್ಟು 12 ಕೋರ್ಟ್ ಗಳಲ್ಲಿ ಜುಲೈ 12ರಂದು ಈ ಲೋಕ್ ಅದಾಲತ್ ನಡೆಯಲಿದೆ. ಇದೊಂದು ಸುವರ್ಣಾವಕಾಶವಿದ್ದು, ಇದರ ಉಪಯೋಗವನ್ನು ಮಾಡಿಕೊಳ್ಳಬೇಕೆಂದು ಮರಿಯಪ್ಪ ಹಿರಿಯ ಸಿವಿಲ್‌ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ. ಅವರು ಹೇಳಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ ಉಪಸ್ಥಿತರಿದ್ದರು.

-----

4ವೈಡಿಆರ್‌11: ಯಾದಗಿರಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್ ಕುರಿತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್‌. ಜೆ. ಮರುಳಸಿದ್ದಾರಾಧ್ಯ ಮಾತನಾಡಿದರು.