ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜೂನ್ 4 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತ ಎಣಿಕೆ ಕಾರ್ಯಕ್ಕೆ ಬಾಗಲಕೋಟ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಎಣಿಕೆ ಕಾರ್ಯಕ್ಕೆ ನೇಮಿಸಲಾದ ವಿವಿಧ ಚುನಾವಣಾ ಅಭ್ಯರ್ಥಿಗಳ ಏಜೆಂಟರು ಯಾವುದೇ ಕಾರಣಕ್ಕೂ ಮೊಬೈಲ್ಗಳನ್ನು ಮತ ಎಣಿಕೆ ಕೇಂದ್ರದಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.ಮೊಬೈಲ್ ನಿಷೇಧ:
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮತ ಎಣಿಕೆ ಪ್ರಕ್ರಿಯೆ ಕುರಿತು ಚುನಾವಣಾ ಅಭ್ಯರ್ಥಿಗಳಿಗೆ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾಹಿತಿ ನೀಡಿದರು. ವ್ಯವಸ್ಥಿತವಾಗಿ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ತರುವದನ್ನು ನಿಷೇಧಿಸಲಾಗಿದೆ. ಮೊಬೈಲ್ಗಳನ್ನು ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾದ ಕೌಂಟರ್ಗಳಲ್ಲಿ ಜಮೆ ಮಾಡಿ ಒಳಪ್ರವೇಶಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡಿಕೊಂಡರು.ಸ್ಟ್ರಾಂಗ್ ರೂಮ್ ಓಪನ್:
ಮತಯಂತ್ರಗಳನ್ನು ಸಂಗ್ರಹಿಸಿಡಲಾದ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಮ್)ಗಳನ್ನು ಹಾಗೂ ಅಂಚೆ ಮತಪತ್ರಗಳ ಭದ್ರತಾ ಕೊಠಡಿಗಳನ್ನು ಮತ ಎಣಿಕೆ ದಿನ ಬೆಳಗ್ಗೆ 7 ಗಂಟೆಗೆ ತೆಗೆಯಲಾಗುತ್ತದೆ. ಹೀಗಾಗಿ, ಅಭ್ಯರ್ಥಿಗಳು ಅಂದು ಬೆಳಗ್ಗೆ 7 ಗಂಟೆಗೆ ಭದ್ರತಾ ಕೊಠಡಿಯ ಮುಂದೆ ಹಾಜರಿರುವಂತೆ ತಿಳಿಸಿದರು. ಭದ್ರತಾ ಕೊಠಡಿಯನ್ನು ತೆಗೆದ ನಂತರ ಮೊದಲಿಗೆ ಅಂಚೆ ಮತ ಪತ್ರಗಳ ಎಣಿಕೆಯನ್ನು ಬೆಳಗ್ಗೆ 8 ಗಂಟೆಯಿಂದ ಆರಂಭಿಸಲಾಗುತ್ತದೆ. ನಂತರ ಇವಿಎಂ ಯಂತ್ರಗಳ ಮತ ಎಣಿಕೆ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.ವಿವಿಧ ಕೊಠಡಿಗಳಲ್ಲಿ ಮತ ಎಣಿಕೆ:
ಜಿಲ್ಲೆಯ ಪ್ರತಿ ಮತ ಕ್ಷೇತ್ರದ ಮತ ಏಣಿಕೆ ಕಾರ್ಯಕ್ಕೆ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತ ಪತ್ರಗಳ ಎಣಿಕೆಗಾಗಿ ನೆಲ ಮಹಡಿಯ 22ರ ಕೊಠಡಿಯಲ್ಲಿ 14 ಟೇಬಲ್ ಹಾಗೂ 20ಎ ಕೊಠಡಿಯಲ್ಲಿ 10 ಟೇಬಲ್ಗಳ ವ್ಯವಸ್ಥೆ ಮತ್ತು ಇಟಿಪಿಬಿಎಸ್ ಸ್ಕ್ಯಾನಿಂಗ್ಗಾಗಿ ಕೊಠಡಿ ಸಂ.20ಎರಲ್ಲಿ 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ನೆಲ ಮಹಡಿಯಲ್ಲಿ ರೂಂ.ನಂ 3ರಲ್ಲಿ ಮುಧೋಳ ಮತಕ್ಷೇತ್ರ, ರೂಂ.ನಂ.11ರಲ್ಲಿ ಬೀಳಗಿ ಮತಕ್ಷೇತ್ರ, ರೂಂ.ನಂ.24 ರಲ್ಲಿ ಬಾದಾಮಿ ಮತಕ್ಷೇತ್ರ, ರೂಂ.ನಂ.15 ರಲ್ಲಿ ನರಗುಂದ ಮತಕ್ಷೇತ್ರ ಹಾಗೂ ಮೊದಲನೇ ಮಹಡಿಯ ರೂಂ. ನಂ.110ರಲ್ಲಿ ತೇರದಾಳ, ರೂಂ. ನಂ.115ರಲ್ಲಿ ಜಮಖಂಡಿ, ರೂಂ. ನಂ.102ರಲ್ಲಿ ಬಾಗಲಕೋಟೆ ಹಾಗೂ ರೂಂ. ನಂ.123ರಲ್ಲಿ ಹುನಗುಂದ ಮತಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು..ಈ ಮತ ಎಣಿಕೆ ಪೂರ್ಣಗೊಂಡ ನಂತರ 5 ಮತಗಟ್ಟೆಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಪ್ರತಿ ಮತಕ್ಷೇತ್ರದ 5 ವಿವಿ ಪ್ಯಾಟ್ಗಳ ಮತ ಎಣಿಕೆ ನಡೆಸಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ಸುತ್ತುವಾರು ಮತ ಎಣಿಕೆಯಾದ ವಿವರವನ್ನು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಮೂಲಕ ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ತಹಸೀಲ್ದಾರ್ ಪಂಪಯ್ಯ, ಚುನಾವಣಾ ವಿಭಾಗದ ಮಹೇಶ ಪಾಂಡವ, ಜಿ.ವಿ.ರಜಪೂತ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ನವನಗರ ರಸ್ತೆ ಬಂದ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಅಭ್ಯರ್ಥಿಗಳು ಮತ್ತು ಮತ ಎಣಿಕೆ ಏಜೆಂಟರ್ಗಳ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೀಮಿಕೇರಿಯಿಂದ ನವನಗರ ಕಡೆಗೆ ಬರುವ ರಸ್ತೆಯು ಸೀಮಿಕೇರಿಯಿಂದ ತೇಜಸ್ ಇಂಟರ್ ನ್ಯಾಷನಲ್ ಸ್ಕೂಲ್ವರೆಗೆ ಬಂದ್ ಇರುತ್ತದೆ. ಮತ ಎಣಿಕೆ ಕಾರ್ಯಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಸಾರ್ವಜನಿಕರ ವಾಹನಗಳಿಗೆ ಓಡಾಡಲು ನಿರ್ಬಂಧವಿರುತ್ತದೆ. ಸಾರ್ವಜನಿಕರು ಗದ್ದನಕೇರಿಯಿಂದ ವಿದ್ಯಾಗಿರಿ ಮೂಲಕ ಹೋಗುವ ಮಾರ್ಗವನ್ನು ಉಪಯೋಗಿಸುವಂತೆ ಎಸ್ಪಿ ತಿಳಿಸಿದರು.